ಬೆಂಗಳೂರು: ಸಮುದಾಯ ಬೆಂಗಳೂರು ‘ತುಘಲಕ್’ ನಾಟಕದ ನೂರನೇ ಪ್ರದರ್ಶನದ ಸಂಭ್ರಮದ ಪ್ರಯುಕ್ತ ಇದೇ 28 ಮತ್ತು 29ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡಿದೆ.
ಗಿರೀಶ್ ಕಾರ್ನಾಡ್ ಅವರು ರಚಿಸಿದ ನಾಟಕ ಇದಾಗಿದೆ. ಕಾರ್ಯಕ್ರಮದಲ್ಲಿ ಕಾರ್ನಾಡರ ನೆನಪು ವಿಚಾರ ಸಂಕಿರಣ, ಸ್ಮರಣ ಸಂಚಿಕೆ ಬಿಡುಗಡೆ, ಕೆ.ಎಂ. ಚೈತನ್ಯ ನಿರ್ದೇಶನದ ಕಾರ್ನಾಡ್ ಸಾಕ್ಷ್ಯಚಿತ್ರ ಪ್ರದರ್ಶನ, ‘ಹೂವು’ ಏಕವ್ಯಕ್ತಿ ನಾಟಕ ಪ್ರದರ್ಶನ, ‘ಕಾರ್ನಾಡರ ಕೃತಿಗಳು–ಒಳನೋಟ’ ವಿಚಾರಸಂಕಿರಣ, ‘ರಂಗ ಚಿಂತನ’ ಪುಸ್ತಕ ಬಿಡುಗಡೆ ಸೇರಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಸಂಜೆ ‘ತುಘಲಕ್’ ನಾಟಕ ಪ್ರದರ್ಶನವಿದೆ. ನಾಡಿನ ಹೆಸರಾಂತ ರಂಗಕರ್ಮಿಗಳು, ಸಾಹಿತಿಗಳು ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಲಿದ್ದಾರ ಎಂದು ಸಮುದಾಯ ಬೆಂಗಳೂರಿನ ಉಪಾಧ್ಯಕ್ಷೆ ಪದ್ಮಾ ಶಿವಮೊಗ್ಗ ತಿಳಿಸಿದ್ದಾರೆ.
‘ತುಘಲಕ್’ ನಾಟಕವನ್ನು ಸಾಮ್ಕುಟ್ಟಿ ಪಟ್ಟಂಕರಿ ನಿರ್ದೇಶಿಸಿದ್ದಾರೆ. ಶ್ರೀಪಾದ್ ಭಟ್ ಅವರು ಸಹ ನಿರ್ದೇಶಕರಾಗಿದ್ದಾರೆ. ಮೇಲ್ನೋಟಕ್ಕೆ ಐತಿಹಾಸಿಕ ನಾಟಕವಾಗಿರುವ ‘ತುಘಲಕ್’, ರಾಜಕಾರಣದ ಮೇಲಿನ ಧರ್ಮದ ಹಿಡಿತವನ್ನು ಎತ್ತಿ ಹಿಡಿಯುತ್ತದೆ ಎಂದು ಹೇಳಿದ್ದಾರೆ.