ಬೆಂಗಳೂರು: ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಿದ್ದ, 18 ತಿಂಗಳುಗಳಿಂದ ಜೈಲಿನಲ್ಲಿರುವ ದೆಹಲಿ ವಿದ್ಯಾರ್ಥಿನಿ ಗುಲ್ಫಿಶಾ ಫಾತಿಮಾ ಅವರನ್ನು ಬಿಡುಗಡೆಗೆ ವಿವಿಧ ಸಂಘಟನೆಗಳು ಒತ್ತಾಯಿಸಿವೆ. ಫಾತಿಮಾ 2020ರ ಏಪ್ರಿಲ್ನಲ್ಲಿ ಬಂಧಿಸಲಾಗಿತ್ತು.
ನಗರದಲ್ಲಿ ಶನಿವಾರ ‘ನಾವೆದ್ದು ನಿಲ್ಲದಿದ್ದರೆ–ಕರ್ನಾಟಕ’ ಸಂಘಟನೆ, ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ, ಎಐಪಿಡಬ್ಲ್ಯುಎ, ಪ್ರಜಾಪ್ರಭುತ್ವ ರಕ್ಷಣೆಗಾಗಿ ಅಭಿಯಾನ, ಪಿಯುಸಿಎಲ್–ಕೆ ಮುಖಂಡರು ಮತ್ತು ಸಮಾನ ಮನಸ್ಕ ನಾಗರಿಕರ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ‘ಐಕ್ಯತಾ ಸಮಾವೇಶ’ದಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು.
ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್ಸಿ), ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್ಪಿಆರ್), ಕಾನೂನು ವಿರೋಧಿ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ), ದೇಶದ್ರೋಹದ ಕಾಯ್ದೆಗಳನ್ನು ರದ್ದುಪಡಿಸ ಬೇಕು, ಕಾನೂನುಬಾಹಿರವಾಗಿ ಬಂಧಿಸಿರುವ ರಾಜಕೀಯ ಕೈದಿಗಳನ್ನು ಬಿಡುಗಡೆಗೊಳಿಸಬೇಕು ಎಂದು ಒತ್ತಾಯಿಸಲಾಯಿತು.
ಸಾಮಾಜಿಕ ಕಾರ್ಯಕರ್ತೆ ಅಪೇಕ್ಷಾ ವೋಹ್ರಾ,‘ಗುಲ್ಫಿಶಾ ತನ್ನ ಹಕ್ಕುಗಳಿಗಾಗಿ ಹೋರಾಟ ಮಾಡಿದ್ದಾರೆ. ಅವರು ಯಾವುದೇ ಸಂಘಟನೆಯ ಜತೆಯೂ ಗುರುತಿಸಿಕೊಂಡಿರಲಿಲ್ಲ. ಹೀಗಾಗಿ, ಸಮಾಜ ಅವರ ಬೆಂಬಲಕ್ಕೆ ನಿಲ್ಲಬೇಕು’ ಎಂದು ಕೋರಿದರು.
‘ದಿ ನ್ಯೂಸ್ ಮಿನಿಟ್’ ಸಂಪಾದಕಿ ಧನ್ಯಾ ರಾಜೇಂದ್ರನ್, ‘ಮಾಧ್ಯಮಗಳು ಸಮಾಜಕ್ಕೆ ಉತ್ತರದಾಯಿ ಆಗಿರಬೇಕು. ಸಮಾಜದಲ್ಲಿ ದ್ವೇಷ ಬಿತ್ತುವವರ ವಿರುದ್ಧ ಹೋರಾಟ ನಡೆಸುವುದು ಅಗತ್ಯವಿದೆ’ ಎಂದು ಹೇಳಿದರು.
ಗುಲ್ಫಿಶಾ ಅವರಿಗೆ ಬೆಂಬಲ ವ್ಯಕ್ತಪಡಿಸಿ ‘ಕಾವ್ಯ ಸಂಜೆ’ ತಂಡದಿಂದ ಕವಿಗೋಷ್ಠಿ ನಡೆಯಿತು. ಮಮತಾ ಸಾಗರ, ಸಿದ್ಧಾರ್ಥ, ಪದ್ಮಾವತಿ, ಶಾಲಿನಿ, ರೇಷ್ಮಾ, ಚಾಂದ್ ಪಾಷಾ, ಶಶಾಂಕ್ ಜೋಹ್ರಿ ಮತ್ತು ದಾದಾ ಪೀರ್ ಜಯಮಾನ್ ಪಾಲ್ಗೊಂಡಿದ್ದರು.