ಬೆಂಗಳೂರು: ‘ಕೋಮು ಗಲಭೆಗಳನ್ನು ನಿಯಂತ್ರಿಸಲು ಮತ್ತು ಜನರಲ್ಲಿ ಧರ್ಮಗ್ರಂಥಗಳ ಬಗ್ಗೆ ಅರಿವು ಮೂಡಿಸಲು ಶಾಲಾ ಪಠ್ಯದಲ್ಲಿ ಎಲ್ಲ ಧರ್ಮಗ್ರಂಥಗಳ ಕುರಿತ ಪಾಠಗಳನ್ನು ಅಳವಡಿಸಬೇಕು’ ಎಂದು ಮಹಾತ್ಮಗಾಂಧಿ ಸೇವಾ ಟ್ರಸ್ಟ್ ಸಂಸ್ಥಾಪಕ ವಿನಯ್ ಗುರೂಜಿ ಒತ್ತಾಯಿಸಿದರು.
ರಾಜ್ಯದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಸರ್ಕಾರ ಮುಂದಾಗಿರುವ ಕಾರಣ ಗುರುವಾರ ಗೋವಿನ ಪೂಜೆ ನೆರವೇರಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.
‘ಪಠ್ಯದಲ್ಲಿ ಧರ್ಮಗ್ರಂಥದ ಸಾರ ಅಳವಡಿಸುವುದರಿಂದ ಧರ್ಮದ ಬಗ್ಗೆ ಜನರಲ್ಲಿರುವ ತಪ್ಪು ಕಲ್ಪನೆ ನಿವಾರಣೆಯಾಗಲಿವೆ. ಸನಾತನ ಭಾರತದ ಸಂಸ್ಕಾರ ಮುಂದಿನ ಪೀಳಿಗೆಗೆ ರವಾನೆಯಾಗಲಿದೆ’ ಎಂದರು.
ಜೆಡಿಎಸ್ ಮುಖಂಡ ಟಿ.ಎ. ಶರವಣ ಮಾತನಾಡಿ, ‘ಗೋಹತ್ಯೆ ನಿಷೇಧ ಕಾಯ್ದೆ ಕುರಿತು ಜನಜಾಗೃತಿ ಮೂಡಿಸಬೇಕು ಮತ್ತು ಕಾಯ್ದೆ ಕುರಿತ ಗೊಂದಲಗಳನ್ನು ಸರ್ಕಾರ ನಿವಾರಿಸಬೇಕು’ ಎಂದು ಒತ್ತಾಯಿಸಿದರು.
ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷ ಬೇಳೂರು ರಾಘವೇಂದ್ರಶೆಟ್ಟಿ ಮಾತನಾಡಿ, ‘ದೇಶಾದ್ಯಂತ ಗೋ ಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವಂತೆ ಒತ್ತಾಯಿಸಿ ಸದ್ಯದಲ್ಲಿಯೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು’ ಎಂದು ತಿಳಿಸಿದರು.