ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಆಶಾ ಕಾರ್ಯಕರ್ತೆಯರು ನಡೆಸುತ್ತಿರುವ ಹೋರಾಟಕ್ಕೆ ವೈಟ್ ಸ್ಪಾರ್ಕ್ಸ್ (ದಂತ ವೈದ್ಯಕೀಯ ಮತ್ತು ವೈದ್ಯಕೀಯ ವಿದ್ಯಾರ್ಥಿಗಳ ವೇದಿಕೆ) ಬೆಂಬಲ ನೀಡಿದೆ.
'ರಾಜ್ಯದಲ್ಲಿ ಒಂದು ದಶಕದಿಂದ ಅನಾರೋಗ್ಯ ಪೀಡಿತರು ಹಾಗೂ ಗರ್ಭಿಣಿಯರ ಆರೋಗ್ಯ ರಕ್ಷಣೆಯಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮಹತ್ವದ್ದು. ಆರೋಗ್ಯ ಕ್ಷೇತ್ರ ಮತ್ತು ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿರುವ ಇವರು ಹಿಂದಿನಿಂದಲೂ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ' ಎಂದು ವೇದಿಕೆಯ ರಾಜ್ಯ ಸಂಚಾಲಕ ಪ್ರಮೋದ್ ತಿಳಿಸಿದರು.
'ಕೊರೊನಾ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿಆಶಾ ಕಾರ್ಯಕರ್ತೆಯರು ಯೋಧರಂತೆ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೂ, ಇವರಿಗೆ ಕನಿಷ್ಠ ವೇತನ, ಸುರಕ್ಷಾ ಪರಿಕರಗಳನ್ನು ನೀಡಿಲ್ಲ. ಕೇವಲ ಚಪ್ಪಾಳೆ, ಹೂಮಳೆಯಿಂದ ಅವರ ಬದುಕು ಹಸನಾಗದು'ಎಂದರು.
'ತಿಂಗಳಿಗೆ ₹12 ಸಾವಿರ ಗೌರವಧನ ನೀಡುವುದು, ವೈಯಕ್ತಿಕ ಸುರಕ್ಷತಾ ಸಾಧನ (ಪಿಪಿಇ) ಕುರಿತ ಬೇಡಿಕೆಗೆ ಸ್ಪಂದಿಬೇಕು. ಇವರ ಹೋರಾಟದಲ್ಲಿ ವೈದ್ಯಕೀಯ ವಿದ್ಯಾರ್ಥಿಗಳು ಹಾಗೂ ವೈದ್ಯರು ಭಾಗವಹಿಸಲಿದ್ದಾರೆ’ ಎಂದರು.
ಆಲ್ ಇಂಡಿಯಾ ಡೆಮಾಕ್ರಟಿಕ್ ಸ್ಟೂಡೆಂಟ್ಸ್ ಆರ್ಗನೈಸೇಷನ್ (ಎಐಡಿಎಸ್) ಸಹ ಜುಲೈ 27ರಂದು ನಡೆಯಲಿರುವ ಹೋರಾಟಕ್ಕೆ ಬೆಂಬಲ ನೀಡುವುದಾಗಿ ತಿಳಿಸಿದೆ.