ಯಲಹಂಕ: ‘ಜೈ ಮಾದಿಗರ ಬೌದ್ಧಿಕ ವೇದಿಕೆಯ ವತಿಯಿಂದ ಡಿಸೆಂಬರ್ 29ರಂದು ವಿಶ್ವ ಮಾದಿಗರ 3ನೇ ವಾರ್ಷಿಕೋತ್ಸವವನ್ನು ಉಪನಗರದ ಹೊಯ್ಸಳ ಕ್ರೀಡಾಂಗಣದಲ್ಲಿ ಏರ್ಪಡಿ ಸಲಾಗುವುದು’ ಎಂದು ವೇದಿಕೆಯ ರಾಷ್ಟ್ರೀಯ ಅಧ್ಯಕ್ಷ ಗೆಡ್ಡಂ ಬಾಪಿರಾಜು ತಿಳಿಸಿದರು.
ಈ ಕುರಿತು ಉಪನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಿದ್ದ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ದೇಶದಲ್ಲಿ ಸುಮಾರು 25 ಕೋಟಿ ಮಾದಿಗರಿದ್ದರೂ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ನಮ್ಮನ್ನು ಕಡೆಗಣಿಸುತ್ತಾ ಬಂದಿವೆ. ಈ ಸಮಾವೇಶದ ಮೂಲಕ ಸರ್ಕಾರಗಳಿಗೆ ಸಂದೇಶ ರವಾನಿಸಲಾಗುವುದು’ ಎಂದರು.
ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಬಿ.ಆರ್.ಮುನಿರಾಜು ಮಾತನಾಡಿ, ‘ವರ್ಷದಲ್ಲಿ ಒಂದು ದಿನವನ್ನು ಮಾದಿಗರ ದಿನವನ್ನಾಗಿ ಆಚರಿಸಬೇಕು. ಮಾದಿಗರ ಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಸಿಗಬೇಕು ಎಂದು ಸರ್ಕಾರಗಳನ್ನು ಒತ್ತಾಯಿಸಲಾಗುವುದು’ ಎಂದು ಹೇಳಿದರು.