ಬೆಂಗಳೂರು: ‘ವಿಪತ್ತು, ಆರೋಗ್ಯ ಆರೈಕೆ, ನೊಂದವರ ಮತ್ತು ದುರ್ಬಲರ ಸೇವೆಗೆ ತನ್ನನ್ನು ತಾನು ಸಮರ್ಪಿಸಿಕೊಳ್ಳಲು ಮಾನವನಿಗೆ ಮಾನವೀಯತೆ, ಸ್ವಾತಂತ್ರ್ಯ ಹಾಗೂ ನಿಷ್ಪಕ್ಷಪಾತ ಮನೋಭಾವ ಅಗತ್ಯ’ ಎಂದುಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕ ಎಸ್.ಜಯಕುಮಾರ್ ಅಭಿಪ್ರಾಯಪಟ್ಟರು.
ಭಾರತೀಯ ರೆಡ್ ಕ್ರಾಸ್ ಸಂಸ್ಥೆಯು ಬುಧವಾರ ಆಯೋಜಿಸಿದ್ದ ರೆಡ್ಕ್ರಾಸ್ ದಿನಾಚರಣೆಯಲ್ಲಿ ಅವರು ಮಾತನಾಡಿದರು.
‘ಮಾನವೀಯ ತತ್ವ ಮತ್ತು ಮೌಲ್ಯಗಳನ್ನು ಬೆಳೆಸುವ ಕಾರ್ಯಕ್ರಮಗಳನ್ನು ಶಾಲೆಗಳಲ್ಲಿ ರೂಪಿಸಲು ಸಂಸ್ಥೆ ಮುಂದಾಗಿದೆ. ಅದಕ್ಕೆ ಬೇಕಾದ ಎಲ್ಲ ಸಹಕಾರಗಳನ್ನು ಶಿಕ್ಷಣ ಇಲಾಖೆ ನೀಡಲಿದೆ. ಧರ್ಮ, ಜಾತಿ ನೋಡದೆ ಚಿಕಿತ್ಸೆಗೆ ಶ್ರಮಿಸುತ್ತಿರುವ ಸಂಸ್ಥೆ ಸೇವೆ ಅನನ್ಯ’ ಎಂದರು.
ಸಂಸ್ಥೆಯ ರಾಜ್ಯ ಘಟಕದ ಉಪಾಧ್ಯಕ್ಷ ಡಾ.ಎಂ.ಕೆ.ಶ್ರೀಧರ್, ‘ರೈಲು ಅಪಘಾತವಾದರೆ ಸಾವಿರಾರು ಮಂದಿ ನೋಡುತ್ತಾರೆ. ಆದರೆ, ಸಹಾಯಕ್ಕೆ ಯಾರೊಬ್ಬರೂ ಹೋಗುವುದಿಲ್ಲ. ಇದು ಸರಿಯಲ್ಲ. ವಯಸ್ಸಿನ ಮಿತಿಯಿಲ್ಲದೆ ಇನ್ನೊಬ್ಬರ ಕಷ್ಟಕ್ಕೆ ಹತ್ತಿರವಾಗಬೇಕು’ ಎಂದು ಹೇಳಿದರು.
ಸಂಸ್ಥೆಯ ರಾಜ್ಯ ಘಟಕದ ಅಧ್ಯಕ್ಷ ಎಸ್.ನಾಗಣ್ಣ, ‘ರೆಡ್ಕ್ರಾಸ್ ಸಂಸ್ಥೆಗೆ ಇನ್ಫೋಸಿಸ್ ಸಂಸ್ಥೆ ₹ 2 ಕೋಟಿ ಕೊಡುಗೆ ನೀಡಿದೆ. ಸಂಸ್ಥೆಯ ಶಾಖೆಗಳನ್ನು 9 ಜಿಲ್ಲೆಗಳಲ್ಲಿ ಸ್ಥಾಪಿಸಲಾಗಿದೆ’ ಎಂದು ಹೇಳಿದರು.
ಸಿಂಡಿಕೇಟ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ಅವರು ₹16.4 ಲಕ್ಷ ಮೌಲ್ಯದ ರಕ್ತ ನಿಧಿ ಉಪಕರಣ ಗಳನ್ನು ಕೊಡುಗೆ ನೀಡಿದರು.
‘ರೆಡ್ ಕ್ರಾಸ್ ಬಗ್ಗೆ ನಿಮ್ಮ ಒಲವು ಮತ್ತು ಪ್ರೀತಿ’ ವಿಷಯಕ್ಕೆ ಸಂಬಂಧಿಸಿದ ರಾಜ್ಯ ಮಟ್ಟದ ಲೇಖನ ಸ್ಪರ್ಧೆಯಲ್ಲಿ ವಿಜೇತರಾದ ಹುಬ್ಬಳ್ಳಿಯ ಶಿವಪ್ಪ ಉಮೇಶ್ (₹2,500), ಗದಗದ ನಿಂಗಮ್ಮ (₹1,500) ಮತ್ತು ಕೃಷ್ಣವೇಣಿ(₹1,000) ಅವರಿಗೆ ಬಹುಮಾನ ನೀಡಲಾಯಿತು.