ಬೆಂಗಳೂರು: ‘ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ ಬಜೆಟ್ನಲ್ಲಿ ‘ಶೂನ್ಯ ಬಂಡವಾಳ ಕೃಷಿ’ಗೆ ಹೆಚ್ಚಿ ಆದ್ಯತೆ ನೀಡಿದ್ದಾರೆ.ಈ ಪದ್ಧತಿಯನ್ನು ಅನುಸರಿಸುವುದು ರೈತಾಪಿ ವರ್ಗಕ್ಕೆ ಮಾರಕವಾಗಲಿದೆ’ ಎಂದು ನವಧಾನ್ಯ ಟ್ರಸ್ಟ್ನ ವಂದನಾ ಶಿವ ಅಭಿಪ್ರಾಯಪಟ್ಟರು.
ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,‘ಕೃಷಿಕರು ಸಂಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರಾಸಾಯನಿಕ ಕೃಷಿ ಪದ್ಧತಿಗೆ ಹೊಂದಿಕೊಂಡಿರುವ ದೇಶದ ಕೃಷಿ ಭೂಮಿಯಲ್ಲಿ ನೈಸರ್ಗಿಕ ಕೃಷಿ ಮಾಡುವುದು ಸವಾಲಿನ ಕೆಲಸ. ಮತ್ತೊಂದೆಡೆ ದೇಶದ ಎಲ್ಲ ಪ್ರದೇಶದಲ್ಲಿಶೂನ್ಯ ಬಂಡವಾಳ ಕೃಷಿ ಮಾಡಲು ಭೂಮಿ ಸೂಕ್ತವಾಗಿಲ್ಲ’ ಎಂದು ತಿಳಿಸಿದರು.
‘ಈ ಬಗ್ಗೆ ತಜ್ಞರೊಂದಿಗೆ ದೊಡ್ಡಮಟ್ಟದಲ್ಲಿ ಚರ್ಚೆ ಆಗಬೇಕು. ಸಾಧಕ ಬಾಧಕಗಳನ್ನು ಅಳೆದು ಬಳಿಕ ಶೂನ್ಯ ಬಂಡವಾಳ ಕೃಷಿ ಬೇಕೇ ಬೇಡವೇ ಎಂಬುದರ ಬಗ್ಗೆ ಕೇಂದ್ರ ಸರ್ಕಾರ ಗಮನ ಹರಿಸಬೇಕು’ ಎಂದರು.
ಕೃಷಿಕ ಬಬ್ಲು ಗಂಗೂಲಿ, ‘ವಿದೇಶಗಳಲ್ಲಿ ಅನುಸರಿಸುವ ಶೂನ್ಯ ಬಂಡವಾಳದ ಕೃಷಿಗೆ ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ. ಆದರೆ, ದೇಶದಲ್ಲಿ ಅದೇ ಮಾದರಿಯ ಕೃಷಿ ಸಾಧ್ಯವಿಲ್ಲ. ಬದಲಾಗಿ ದೇಸಿ ಕೃಷಿ ಪದ್ಧತಿ ಪ್ರೋತ್ಸಾಹಿಸಿ,ಮಣ್ಣಿನ ಫಲವತ್ತತೆ ಹೆಚ್ಚು ಮಾಡಬಹುದು’ ಎಂದರು.