ರಾಮನಗರ: ಆಸ್ತಿ ವಿಷಯಕ್ಕೆ ಅಣ್ಣನ ಮಗನಿಂದಲೇ ಅಪಹರಣಕ್ಕೆ ಒಳಗಾಗಿದ್ದ ಅಂಧ್ರಹಳ್ಳಿಯ ಮುನಿಯಪ್ಪ (60) ಅವರನ್ನು ಅಪಹರಣಕಾರರಿಂದ ಬಿಡಿಸಿಕೊಂಡು ಬರುವಲ್ಲಿ ರಾಮನಗರ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಈ ಅಪಹರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ವಿನಯ್, ಪ್ರವೀಣ್, ಯಶವಂತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮುನಿಯಪ್ಪ ಅವರ ಸಹೋದರ ತಿಮ್ಮಯ್ಯ ಅವರ ಪುತ್ರ ರಂಗೇಗೌಡ ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದು, ಆತ ಮತ್ತು ಆತನ ಇತರ ಮೂವರು ಸಹಚರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ಅಂಧ್ರಹಳ್ಳಿಯಲ್ಲಿನ 18 ಎಕರೆ ಜಮೀನಿಗೆ ಸಂಬಂಧಿಸಿದಂತೆ ಮುನಿಯಪ್ಪ ಮತ್ತು ರಂಗೇಗೌಡ ನಡುವೆ ಎಂಟು– ಹತ್ತು ವರ್ಷದಿಂದ ವಿವಾದ ಇತ್ತು. ಅದಕ್ಕೆ ಸಂಬಂಧಿಸಿದಂತೆ ರಂಗೇಗೌಡ ಕೆಲ ಬಾರಿ ಮುನಿಯಪ್ಪ ಅವರನ್ನು ಬೆದರಿಸಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರದ ಮುನಿಯಪ್ಪ ಅವರಿಗೆ ಪಾಠ ಕಲಿಸಲು ರಂಗೇಗೌಡ ಅಪಹರಣ ಮಾಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.
ಮುನಿಯಪ್ಪ ಅವರು ಸೋಮವಾರ ಬೆಳಿಗ್ಗೆ ವಾಯು ವಿಹಾರದಲ್ಲಿ ಇದ್ದಾಗ ಅವರ ಅಪಹರಣ ಮಾಡಲಾಯಿತು. ವಿಷಯ ಗೊತ್ತಾದ ಕೂಡಲೇ ರಾಮನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗ್ರವಾಲ್ ಅವರು ಪ್ರಕರಣ ಪತ್ತೆಗೆ ವಿಶೇಷ ತಂಡ ರಚಿಸಿದರು. ತಾವರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಯಿತು.
ಅಪಹರಣಕಾರರ ತಂಡ ಮೊದಲು ಶಿವಮೊಗ್ಗ ಮಾರ್ಗ ದಲ್ಲಿ ಸಾಗಿ ನಂತರ ಎರಡು ತಂಡವಾಗಿ ವಿಭಜನೆಯಾಯಿತು. ಅದರಲ್ಲಿ ಒಂದು ತಂಡ ಹುಬ್ಬಳ್ಳಿ ಕಡೆಗೆ ಸಾಗಿತು. ಹುಬ್ಬಳ್ಳಿಯಲ್ಲಿ ಅಪರಾಧ ವಿಭಾಗದ ನಾಕಾಬಂದಿಯ ಬಳಿ ಬಂದ ‘ಇಂಡಿಕಾ’ ಕಾರಿನಲ್ಲಿ ವೃದ್ಧರೊಬ್ಬರು ಚೀರುತ್ತಿದ್ದರು. ಆ ಕಾರನ್ನು ತಪಾಸಣೆ ನಡೆಸಿದಾಗ ಅಪಹರಣವಾಗಿದ್ದ ಮುನಿಯಪ್ಪ ಪತ್ತೆಯಾದರು. ಕೂಡಲೇ ಪೊಲೀಸರು ಮೂವರು ಆರೋಪಿಗಳನ್ನು ವಶಕ್ಕೆ ತೆಗೆದುಕೊಂಡು ರಾಮನಗರ ಪೊಲೀಸರಿಗೆ ಹಸ್ತಾಂತರಿಸಿದದರು ಎಂದು ಪ್ರಕರಣದ ತನಿಖಾಧಿಕಾರಿಯೂ ಆದ ಕುಂಬಳಗೊಡು ಪೊಲೀಸ್ ಠಾಣೆಯ ಎಸ್.ಐ ಮಂಜುನಾಥ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು. ಈ ಆರೋಪಿಗಳನ್ನು ನ್ಯಾಯಾಲಯದ ಪೊಲೀಸ್ ವಶಕ್ಕೆ ಒಪ್ಪಿಸಿದೆ ಎಂದು ಅವರು ತಿಳಿಸಿದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.