ಬೆಂಗಳೂರು: ಗೃಹಪ್ರವೇಶಕ್ಕಾಗಿ ಒಂಟೆ ಮತ್ತು ಆನೆಯನ್ನು ಅಕ್ರಮವಾಗಿ ಸಾಗಾಟ ಮಾಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಗುರುವಾರ ಪ್ರಕರಣ ದಾಖಲಿಸಿದ್ದಾರೆ.
ಮಾವುತ ಇಸ್ಮಾಯಿಲ್ ಮತ್ತು ಆತನ ಸಹಾಯಕ ಅಶೋಕ್ ವಿರುದ್ಧ ಪ್ರಕರಣ ದಾಖಲಾಗಿದೆ. ಹೈದರಾಬಾದ್ನಿಂದ ಒಂಟೆಯನ್ನು ಮತ್ತು ಚಿತ್ರದುರ್ಗದ ತರಳಬಾಳು ಮಠದಿಂದ ಆನೆಯನ್ನು ನಗರಕ್ಕೆ ಕರೆತಂದು ದೇವನಹಳ್ಳಿಯ ಸ್ಟೋನ್ಹಿಲ್ ಶಾಲೆಯ ಬಳಿ ಕಟ್ಟಲಾಗಿತ್ತು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.
ದೇವನಹಳ್ಳಿಯಲ್ಲಿರುವ ಎಂಬೆಸ್ಸಿ ಗ್ರೂಪ್ ಮಾಲೀಕ ಜಿತೇಂದ್ರ ನಿರ್ವಾಣಿ ಅವರ ಮನೆಯ ಗೃಹ ಪ್ರವೇಶಕ್ಕೆ ಒಂಟೆ, ಆನೆಯನ್ನು ತರಲಾಗಿತ್ತು ಎಂದು ಇಸ್ಮಾಯಿಲ್ ಮತ್ತು ಅಶೋಕ್ ಹೇಳಿಕೆ ನೀಡಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.