ಬೆಂಗಳೂರು: ಜಾತ್ಯತೀತ ಸಮಾಜ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಇಂದಿರಾ ಕೃಷ್ಣಪ್ಪ ಅವರಿಗೆ ಕನ್ನಡ ಸಾಹಿತ್ಯ ಪರಿಷತ್ತಿನ ನಗರ ಜಿಲ್ಲಾ ಘಟಕವು ನೀಡುವ `ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ~ಯ ಗೌರವ ಸಂದಿದೆ.
ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ಪರಿಷತ್ತಿನ ಜಿಲ್ಲಾ ಅಧ್ಯಕ್ಷ ಸಿ.ಕೆ.ರಾಮೇಗೌಡ, `ಸಾಹಿತ್ಯ ಹಾಗೂ ಸಮಾಜಕ್ಕೆ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸಿ ಪ್ರೋತ್ಸಾಹಿಸಲು, ಬ್ಯಾಂಕ್ನಲ್ಲಿ 5 ಲಕ್ಷ ರೂಪಾಯಿ ಠೇವಣಿಯಿಟ್ಟು ಅದರಿಂದ ಬರುವ ರೂ 40 ಸಾವಿರ ಬಡ್ಡಿ ಹಣದಲ್ಲಿ 25 ಸಾವಿರ ರೂಪಾಯಿಗಳನ್ನು ಪ್ರಶಸ್ತಿಯೊಂದಿಗೆ ನೀಡುತ್ತಿದ್ದೇವೆ. ಉಳಿದ ಹಣವನ್ನು ಕಾರ್ಯಕ್ರಮದ ಆಯೋಜನೆಗೆ ವೆಚ್ಚ ಮಾಡುತ್ತಿದ್ದೇವೆ. 2009ರಿಂದ ಈ ಪ್ರಶಸ್ತಿ ನೀಡುತ್ತಿದ್ದೇವೆ~ ಎಂದರು.
`ಇದೇ 13ರಂದು ಸಂಜೆ 5ಕ್ಕೆ ಪರಿಷತ್ತಿನ ಶ್ರೀಕೃಷ್ಣರಾಜ ಪರಿಷನ್ಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು. ವಿಧಾನಪರಿಷತ್ ಸದಸ್ಯ ಎಂ.ವಿ.ರಾಜಶೇಖರನ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ~ ಎಂದು ತಿಳಿಸಿದರು.
ಕೋಶಾಧ್ಯಕ್ಷ ಎ.ಎಸ್.ನಾಗರಾಜಸ್ವಾಮಿ, ಗೌರವ ಕಾರ್ಯದರ್ಶಿ ಡಾ.ಚಿತ್ತಯ್ಯ ಪೂಜಾರ್, ಗೌರವ ಸಂಚಾಲಕರಾದ ಎಂ.ತಿಮ್ಮಯ್ಯ, ಮಾಯಣ್ಣ, ಎಂ.ಲಕ್ಷ್ಮೀನರಸಿಂಹ ಗೋಷ್ಠಿಯಲ್ಲಿದ್ದರು.