ಬೆಂಗಳೂರು: ಅಮೃತಹಳ್ಳಿ ಸಮೀಪದ ಜಕ್ಕೂರಿನ ಉಪೇಕ್ಷ್ ಪ್ರಧಾನ್ ಎಂಬುವವರ ಮನೆಯಲ್ಲಿ ದುಷ್ಕರ್ಮಿಗಳು ಕಿಟಕಿ ಮುರಿದು ಒಳಗೆ ನುಗ್ಗಿ, ಚಿನ್ನಾಭರಣ ಹಾಗೂ ನಗದು ದೋಚಿದ್ದಾರೆ.
ಡಾರ್ಜಿಲಿಂಗ್ ಮೂಲದ ಉಪೇಕ್ಷ್ ಪ್ರಧಾನ್, ಅವರು ಗ್ರಾಫಿಕ್ಸ್ ವಿನ್ಯಾಸಕಾರರಾಗಿದ್ದಾರೆ.
ಅವರು ಮೂರು ವರ್ಷಗಳಿಂದ ನಗರದಲ್ಲಿ ವಾಸವಾಗಿದ್ದಾರೆ. ಸಂಬಂಧಿಕರೊಬ್ಬರು ಮೃತಪಟ್ಟಿದ್ದರಿಂದ ಮೇ 18ರಂದು ಪತ್ನಿಯೊಂದಿಗೆ ಅವರು ಚೆನ್ನೈಗೆ ಹೋಗಿದ್ದರು.
ಈ ವೇಳೆ ಕಿಟಕಿ ಮುರಿದು ಒಳಗೆ ನುಗ್ಗಿರುವ ಕಳ್ಳರು 15 ಗ್ರಾಂ ತೂಕದ ಎರಡು ಓಲೆ ಮತ್ತು ನಗದು ದೋಚಿದ್ದಾರೆ. ಮೇ 20ರಂದು ವಾಪಸ್ ಮನೆಗೆ ಬಂದಾಗ ಪ್ರಕರಣ ಬೆಳಕಿಗೆ ಬಂದಿದೆ. ಎಷ್ಟು ಹಣ ದೋಚಿದ್ದಾರೆ ಎಂಬ ಬಗ್ಗೆ ಉಪೇಕ್ಷ್ ನಿಖರವಾಗಿ ಹೇಳಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.