ಬೆಂಗಳೂರು: ಹೆಸರಘಟ್ಟ ಹೋಬಳಿಯ ಕಾಕೋಳು ಗ್ರಾಮದ ಕೆರೆಯು ಎರಡು ದಿನಗಳಿಂದ ಸುರಿದ ಮಳೆಗೆ ತುಂಬಿ, ಕೋಡಿ ಹರಿಯುತ್ತಿದೆ. ಎಂಟು ವರ್ಷಗಳ ನಂತರ ಕೆರೆ ಕೋಡಿ ಬಿದ್ದಿರುವುದನ್ನು ಕಂಡು ಗ್ರಾಮಸ್ಥರ ಮೊಗದಲ್ಲಿ ಸಂತಸದ ಹೊನಲು ಮೂಡಿದೆ.
‘ಕಾಕೋಳು ಕೆರೆಯ ಆಸುಪಾಸಿನಲ್ಲಿ ಅರಕೆರೆ, ಬುಡವನಹಳ್ಳಿ, ಹನಿಯೂರು, ಸೋಣೇನಹಳ್ಳಿ ಗ್ರಾಮಗಳು ಇವೆ. ಕೆರೆ ತುಂಬಿರುವುದರಿಂದ ಈ ಗ್ರಾಮಗಳಲ್ಲಿ ಅಂತರ್ಜಲ ವೃದ್ಧಿಸಲಿದೆ. ಬೆಳೆ ಬೆಳೆಯುಲು ಹೆಚ್ಚಿನ ಅನುಕೂಲವಾಗುತ್ತದೆ’ ಎಂದು ಗ್ರಾಮದ ನಿವಾಸಿ ವಿಜೇತ ತಿಳಿಸಿದರು.
ಕಾಕೋಳು ಕೆರೆಯು 300 ಎಕರೆಯಲ್ಲಿದೆ. 30 ಅಡಿಗಳಷ್ಟು ಆಳವಿದೆ. ಕೆರೆಯಿಂದ ಕೋಡಿ ಹರಿಯುವ ನೀರು 6 ಕಿ.ಮೀ ದೂರದಲ್ಲಿರುವ ಹೆಸರ
ಘಟ್ಟ ಕೆರೆ ಸೇರಲಿದೆ. ಕೆರೆಯಲ್ಲಿ ಸಾಕಷ್ಟು ಜಾಲಿ ಮರಗಳು ಬೆಳೆದಿದ್ದು, ಅವುಗಳನ್ನು ತೆಗೆಸಿ ಕೆರೆ ಅಭಿವೃದ್ಧಿಪಡಿಸಬೇಕು ಎಂಬುದು ಈ ಭಾಗದ ರೈತರ ಬಹುದಿನಗಳ ಬೇಡಿಕೆಯಾಗಿದೆ.
‘ಕೆರೆ ಅಭಿವೃದ್ಧಿಗೆ ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಅಭಿವೃದ್ಧಿ ಪ್ರಾಧಿಕಾರದಿಂದ ಸುಮಾರು ₹80 ಲಕ್ಷ ಅನುದಾನ ಕೇಳಲಾಗಿದೆ. ಅನುದಾನ ಮಂಜೂರಾದರೆ ಮುಂದಿನ ಮಳೆಗಾಲದೊಳಗೆ ಕೆರೆ ಸಂಪೂರ್ಣ ಅಭಿವೃದ್ಧಿಪಡಿಸುತ್ತೇವೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಚೊಕ್ಕನಹಳ್ಳಿ ವೆಂಕಟೇಶ್ ಅವರು ಪ್ರತಿಕ್ರಿಯಿಸಿದ್ದಾರೆ.