ಬೆಂಗಳೂರು: ವಸತಿ ಯೋಜನೆ ಅನುಷ್ಠಾನಗೊಳಿಸಲು ಅನುಕೂಲವಾಗುವಂತೆ ಖಾಸಗಿ ಭೂಮಿಗೆ ನಿಗದಿ ಮಾಡಿದ್ದ ಬೆಲೆಯನ್ನು ಪರಿಷ್ಕರಿಸಲು ಸಂಪುಟ ಸಭೆ ತೀರ್ಮಾನಿಸಿದೆ.
ಸರ್ಕಾರಿ ಭೂಮಿ ಸಿಗದೇ ಇದ್ದಾಗ ಖಾಸಗಿ ಭೂಮಿ ಖರೀದಿಸುವ ಅಧಿಕಾರವನ್ನು ಜಿಲ್ಲಾಧಿಕಾರಿಗಳಿಗೆ ನೀಡಲಾಗಿದೆ. ಸರ್ಕಾರ ನಿಗದಿಪಡಿಸಿದ ಬೆಲೆ ಕಡಿಮೆ ಇದ್ದುದರಿಂದ ಯಾರೂ ಭೂಮಿ ನೀಡಲು ಮುಂದೆ ಬರುತ್ತಿರಲಿಲ್ಲ. ಪ್ರತೀ ಎಕರೆಗೆ ಗ್ರಾಮೀಣ ಪ್ರದೇಶದಲ್ಲಿ ₹6 ಲಕ್ಷದಿಂದ 9 ಲಕ್ಷ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ₹ 8 ಲಕ್ಷದಿಂದ 12 ಲಕ್ಷ, ಪುರಸಭೆ ವ್ಯಾಪ್ತಿಯಲ್ಲಿ ₹10 ಲಕ್ಷದಿಂದ 15 ಲಕ್ಷ, ನಗರಸಭೆ ವ್ಯಾಪ್ತಿಯಲ್ಲಿ ₹15 ಲಕ್ಷದಿಂದ 22.5 ಲಕ್ಷ, ಪಾಲಿಕೆ ವ್ಯಾಪ್ತಿಯಲ್ಲಿ ₹22ಲಕ್ಷದಿಂದ 37.5 ಲಕ್ಷ ಹಾಗೂ ಬಿಬಿಎಂಪಿ ವ್ಯಾಪ್ತಿಯಲ್ಲಿ ₹ 55 ಲಕ್ಷದಿಂದ 75 ಲಕ್ಷಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ ಎಂದು ವಿವರಿಸಿದರು.
ಯುಕೆಪಿಗೆ ₹ 940 ಕೋಟಿ: ಕೃಷ್ಣಾ ಮೇಲ್ದಂಡೆ ಯೋಜನೆಯಡಿ ಮುದ್ದೇಬಿಹಾಳ ಹಾಗೂ ಸಿಂದಗಿ ತಾಲ್ಲೂಕುಗಳ 20,243 ಹೆಕ್ಟೇರ್ ಪ್ರದೇಶಕ್ಕೆ ₹ 840 ಕೋಟಿ ವೆಚ್ಚದಲ್ಲಿ ಬೂದಿಹಾಳ–ಪೀರಾಪುರ ಏತನೀರಾವರಿ ಯೋಜನೆಯ ಮೂಲಕ ಹನಿ ನೀರಾವರಿ ಮೂಲಕ ನೀರಾವರಿ ಕಲ್ಪಿಸುವ ಯೋಜನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ.
ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ–1 ಮತ್ತು 2 ರ ಅಡಿಯಲ್ಲಿ ನಿರ್ಮಿಸಲಾಗಿರುವ 106 ಪುನರ್ವಸತಿ ಕೇಂದ್ರಗಳ ಮುಂದುವರಿದ ಕಾಮಗಾರಿಗಳಿಗೆ ₹ 100 ಕೋಟಿ ಅನುದಾನ ನೀಡಲು ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಜಯಚಂದ್ರ ಹೇಳಿದರು.