ಬೆಂಗಳೂರು: ತರಗತಿಗೆ ಮೊಬೈಲ್ ತಂದ ಕಾರಣಕ್ಕೆ ವಿದ್ಯಾರಣ್ಯಪುರದ ಶಾರದಾ ಸ್ಕೂಲ್ ಆಫ್ ಆರ್ಕಿಟೆಕ್ಚರ್ ಶಿಕ್ಷಣ ಸಂಸ್ಥೆಯ ಮಾಲೀಕರು ವಿದ್ಯಾರ್ಥಿಗಳಿಂದ ಮೊಬೈಲ್ಗಳನ್ನು ಕಸಿದುಕೊಂಡು ನೀರಿನ ಬಕೆಟ್ಗೆ ಹಾಕಿದ ಘಟನೆ ಮಂಗಳವಾರ ನಡೆದಿದೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳು, ಮೊಬೈಲ್ಗಳನ್ನು ರಿಪೇರಿ ಮಾಡಿಸಿಕೊಡುವಂತೆ ಒತ್ತಾಯಿಸಿ ಸುಮಾರು ಒಂದೂವರೆ ತಾಸು ಪ್ರತಿಭಟನೆ ಮಾಡಿದರು. ಮಧ್ಯಪ್ರವೇಶಿಸಿದ ವಿದ್ಯಾರಣ್ಯಪುರ ಪೊಲೀಸರು, ಪರಿಸ್ಥಿತಿಯನ್ನು ನಿಯಂತ್ರಿಸಿದರು.
‘ಸಂಸ್ಥೆಯ ಮಾಲೀಕರಾದ ವೈ.ಎನ್.ಶರ್ಮಾ ಅವರು ಮೂರು ಮೊಬೈಲ್ಗಳನ್ನು ನೀರಿಗೆ ಹಾಕಿದ್ದಾರೆ. ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ನಂತರ, ಆ ಮೊಬೈಲ್ಗಳನ್ನು ರಿಪೇರಿ ಮಾಡಿಸಿಕೊಡುವುದಾಗಿ ಹೇಳಿದ್ದಾರೆ. ಹೀಗಾಗಿ ಸಾಮಾನ್ಯ ಸ್ವರೂಪದ ಅಪರಾಧ (ಎನ್.ಸಿ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ‘ವಿದ್ಯಾರ್ಥಿಗಳು ತರಗತಿ ಅವಧಿಯಲ್ಲಿ ಮೊಬೈಲ್ ಬಳಸುತ್ತಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. ಹೀಗಾಗಿ ತರಗತಿಗೆ ಮೊಬೈಲ್ ತರುವುದನ್ನು ಆ.11ರಿಂದ ನಿರ್ಬಂಧಿಸಲಾಗಿತ್ತು. ಆದರೂ ವಿದ್ಯಾರ್ಥಿಗಳು ಮೊಬೈಲ್ ಬಳಕೆ ಮಾಡುತ್ತಿರುವ ಬಗ್ಗೆ ಪೋಷಕರೇ ದೂರು ಕೊಟ್ಟಿದ್ದರು. ಮಂಗಳವಾರ ವಿದ್ಯಾರ್ಥಿಗಳ ಬ್ಯಾಗ್ಗಳನ್ನು ಪರಿಶೀಲಿಸಿದಾಗ ಮೂರು ಮೊಬೈಲ್ಗಳು ಪತ್ತೆಯಾದವು. ಹೀಗಾಗಿ ಅವುಗಳನ್ನು ನೀರಿಗೆ ಎಸೆದೆ’ ಎಂದು ವೈ.ಎನ್.ಶರ್ಮಾ ‘ಪ್ರಜಾವಾಣಿ’ಗೆ ತಿಳಿಸಿದರು.
‘ಮೂರನೇ ಸೆಮಿಸ್ಟರ್ನ ವಿದ್ಯಾರ್ಥಿಯೊಬ್ಬ ಇತ್ತೀಚೆಗೆ ತರಗತಿ ಅವಧಿಯಲ್ಲಿ ಸಹಪಾಠಿಯ ಮೊಬೈಲ್ಗೆ ವಾಟ್ಸ್ ಆ್ಯಪ್ ಮೂಲಕ ಅಶ್ಲೀಲ ಸಂದೇಶಗಳನ್ನು ಕಳುಹಿಸಿದ್ದ. ಆದರೆ, ಆ ಸಹಪಾಠಿ ಮೊಬೈಲನ್ನು ಮನೆಯಲ್ಲೇ ಬಿಟ್ಟು ತರಗತಿಗೆ ಬಂದಿದ್ದರಿಂದ ಆತನ ಪೋಷಕರು ಸಂದೇಶಗಳನ್ನು ವೀಕ್ಷಿಸಿದ್ದರು. ನಂತರ ಅವರು ಈ ವಿಷಯವನ್ನು ಆಡಳಿತ ಮಂಡಳಿ ಗಮನಕ್ಕೆ ತಂದಿದ್ದರು.ಹೀಗಾಗಿ ಪ್ರತಿದಿನ ಸೆಕ್ಯುರಿಟಿ ಗಾರ್ಡ್ ಮೂಲಕ ತಪಾಸಣೆ ಮಾಡಿಸಿ ವಿದ್ಯಾರ್ಥಿಗಳನ್ನು ಕಾಲೇಜಿನೊಳಗೆ ಬಿಡಲಾಗುತ್ತಿತ್ತು. ಆದರೂ ಕೆಲವರು ಸಿಬ್ಬಂದಿ ಕಣ್ತಪ್ಪಿಸಿ ಮೊಬೈಲ್ ತೆಗೆದುಕೊಂಡು ಬರುತ್ತಿದ್ದರು’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.