ಪೀಣ್ಯ ದಾಸರಹಳ್ಳಿ: ತುಮಕೂರು ರಸ್ತೆಯ ಗೊರಗುಂಟೆಪಾಳ್ಯದಿಂದ ವಿಡಿಯಾ ಕಾರ್ಖಾನೆ ನಡುವೆ ಪಾದಚಾರಿಗಳಿಗಾಗಿ ನಾಲ್ಕು ಕೆಳ ಸೇತುವೆಗಳನ್ನು (ಸಬ್ವೇ) ನಿರ್ಮಿಸಲಾಗುವುದು ಎಂದು ಸಚಿವ ಆರ್.ಅಶೋಕ ತಿಳಿಸಿದರು.
ಬುಧವಾರ ಜಾಲಹಳ್ಳಿ ವೃತ್ತದಲ್ಲಿ ಪಾದಚಾರಿ ಮಾರ್ಗಗಳ ನಿರ್ಮಾಣ ಕುರಿತು ಬಿಬಿಎಂಪಿ ಮತ್ತು ಬೆಂಗಳೂರು ಮೆಟ್ರೊ ರೈಲು ನಿಗಮದ ಅಧಿಕಾರಿಗಳ ಜೊತೆ ಸ್ಥಳ ಪರಿಶೀಲನೆ ನಡೆಸಿ ಮಾತನಾಡಿದರು.
`ಪೀಣ್ಯ ಕೈಗಾರಿಕಾ ಪ್ರದೇಶವು ಏಷ್ಯಾದಲ್ಲೇ ಅತಿದೊಡ್ಡ ಸಣ್ಣ ಹಾಗೂ ಮಧ್ಯಮ ಪ್ರಮಾಣದ ಕೈಗಾರಿಕಾ ಪ್ರದೇಶವಾಗಿದೆ. ನಿತ್ಯ ಲಕ್ಷಾಂತರ ಜನರು ಓಡಾಡುವ ಈ ಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಾದಚಾರಿಗಳಿಗೆ ಯಾವುದೇ ಸುರಕ್ಷತೆ ಇಲ್ಲ. ತಿಂಗಳಲ್ಲಿ ಎರಡರಿಂದ ಮೂರು ಮಂದಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ~ ಎಂದರು
`ಸಬ್ವೇಗಳ ನಿರ್ಮಾಣಕ್ಕೆ ಯೋಜನಾ ವರದಿಯನ್ನು ತಯಾರಿಸಿ ತಕ್ಷಣದಿಂದಲೇ ಕಾಮಗಾರಿ ಕೈಗೊಳ್ಳಲು ಸೂಚಿಸಲಾಗಿದೆ. ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಜತೆಗೂ ಚರ್ಚಿಸಿ ಅನುಮತಿ ಪಡೆಯಲಾಗಿದೆ~ ಎಂದು ಅವರು ತಿಳಿಸಿದರು.
ಶಾಸಕ ಎಸ್.ಮುನಿರಾಜು, ಮೇಯರ್ ಶಾರದಮ್ಮ, ಬಿಬಿಎಂಪಿ ಸದಸ್ಯರಾದ ಗಂಗಾಧರ, ಶಶಿ ಶಿವ ಕುಮಾರ, ಪುಟ್ಟಮ್ಮ ತಮ್ಮಣ್ಣ, ಪಾಲಿಕೆ ಆಯುಕ್ತ ಎಂ.ಕೆ.ಶಂಕರಲಿಂಗೇಗೌಡ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಎನ್. ಶಿವಶೈಲಂ ಮೊದಲಾದವರು ಹಾಜರಿದ್ದರು.