ಬೆಂಗಳೂರು: ‘ನನ್ನ ಆಡಳಿತದ ಅವಧಿಯಲ್ಲಿ ನಗರವನ್ನು ಕಸಮುಕ್ತಗೊಳಿಸುವುದೇ ಪ್ರಮುಖ ಗುರಿಯಾಗಿತ್ತು. ಆದರೆ, ಅದನ್ನು ಈಡೇರಿಸಲು ಸಾಧ್ಯವಾಗಲಿಲ್ಲ’
–ಅಧಿಕಾರದಿಂದ ನಿರ್ಗಮಿಸುತ್ತಿರುವ ಮೇಯರ್ ಬಿ.ಎಸ್. ಸತ್ಯನಾರಾಯಣ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದ ಮಾತಿದು. ‘ನಗರವನ್ನು ಕಸಮುಕ್ತ ಮಾಡದಿದ್ದರೂ ಆ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನ ಆಗಿದೆ. ಕಸ ಸಂಸ್ಕರಣೆಗೆ ಸಂಬಂಧಿಸಿದಂತೆ ನಾಲ್ಕು ಘಟಕಗಳ ಸ್ಥಾಪನೆಗೆ ಈಗಾಗಲೇ ಒಪ್ಪಿಗೆ ದೊರೆತಿದೆ. ಅವುಗಳು ಕಾರ್ಯಾರಂಭ ಮಾಡಿದರೆ ಕಸದ ಸಮಸ್ಯೆ ತಗ್ಗಲಿದೆ’ ಎಂದು ವಿವರಿಸಿದರು.
‘ಬಿಬಿಎಂಪಿ ಸದಸ್ಯನಾಗಿ ನಮಗೆ ಇನ್ನೂ ಏಳು ತಿಂಗಳ ಕಾಲಾವಕಾಶ ಇದೆ. ಕಸ ಸಂಸ್ಕರಣೆ ಯೋಜನೆಗಳು ಅನುಷ್ಠಾನಗೊಳ್ಳಲು ಸಾಧ್ಯವಾದ ಪ್ರಯತ್ನ ಮಾಡುತ್ತೇವೆ’ ಎಂದು ತಿಳಿಸಿದರು.
‘ಕೆ.ಆರ್. ಮಾರುಕಟ್ಟೆಯಲ್ಲಿ ಸತತ 37 ಸೋಮವಾರ ಸ್ವಚ್ಛತಾ ಆಂದೋಲನ ನಡೆಸಲಾಗಿದೆ. ಮಾರುಕಟ್ಟೆಯಲ್ಲಿ ಸ್ವಚ್ಛ ವಾತಾವರಣ ನಿರ್ಮಾಣವಾಗಿದೆ’ ಎಂದು ಹೆಮ್ಮೆಯಿಂದ ಹೇಳಿದರು. ‘ಮಂಡೂರಿನ ಮುಖಂಡರು ಗ್ರಾಮದಲ್ಲಿ ವಾಸ್ತವ್ಯ ಮಾಡುವ ಅಗತ್ಯವಿಲ್ಲ ಎಂದು ಹೇಳಿದ್ದರಿಂದ ನಾನು ಅಲ್ಲಿ ರಾತ್ರಿ ತಂಗಲು ಹೋಗಲಿಲ್ಲ’ ಎಂದು ತಿಳಿಸಿದರು. ‘ಮಂಡೂರಿನ ಕಸದ ಸಮಸ್ಯೆಯನ್ನು ಬಗೆಹರಿಸುವುದು ದೋಸೆ ತಿರುವಿ ಹಾಕಿದಷ್ಟು ಸುಲಭವೇನೂ ಅಲ್ಲ. ಆದರೆ. ಡಿಸೆಂಬರ್ 1ರಿಂದ ಅಲ್ಲಿಗೆ ಕಸ ಒಯ್ಯುವುದನ್ನು ನಿಲ್ಲಿಸಲಾಗುತ್ತದೆ’ ಎಂದು ಹೇಳಿದರು. ಅದರ ಹೊಣೆಯನ್ನು ನೀವೇ ತೆಗೆದುಕೊಳ್ಳುತ್ತೀರಾ ಎಂಬ ಪ್ರಶ್ನೆಗೆ, ‘ಬಿಬಿಎಂಪಿ ಸದಸ್ಯನಾಗಿ ನಾನೂ ಜವಾಬ್ದಾರಿ ಹೊರುವೆ’ ಎಂದು ಉತ್ತರಿಸಿದರು.
‘ಮೈಸೂರು ಮತ್ತು ಗೂಡ್ಸ್ಶೆಡ್ ರಸ್ತೆಗಳ ವಿಸ್ತರಣೆ ಮಾಡಿದ್ದು, ಸಿಎನ್ಆರ್ ರಾವ್ ಜಂಕ್ಷನ್ ಸಂಚಾರಕ್ಕೆ ಮುಕ್ತಗೊಳಿಸಿದ್ದು ನನ್ನ ಆಡಳಿತಾವಧಿಯಲ್ಲಿ ಆಗಿರುವ ಸಾಧನೆಗಳು’ ಎಂದ ಅವರು, ‘ನಮ್ಮ ಬೆಂಗಳೂರು ನನ್ನ ಕೊಡುಗೆ’ಯಿಂದ ಬಿಬಿಎಂಪಿಗೆ ₨ 85 ಕೋಟಿ ಹಣ ಉಳಿಸಿದ ತೃಪ್ತಿಯಿದೆ’ ಎಂದೂ ಹೇಳಿದರು.
‘ಬೆಂಗಳೂರಿಗೆ ಒಬ್ಬ ಮೇಯರ್ ಸಾಕು. ಆದರೆ, ಮೇಯರ್ಗೆ ಹೆಚ್ಚಿನ ಕಾಲಾವಧಿ ಬೇಕು’ ಎಂದು ಅವರು ಅಭಿಪ್ರಾಯಪಟ್ಟರು.
ಮಂಡನೆಯಾಗದ ಆಡಳಿತ ವರದಿ: ವಿಷಾದ
ಬಿಬಿಎಂಪಿ ಆಡಳಿತದ ಲೋಪ–ದೋಷಗಳ ಮೇಲೆ ಬೆಳಕು ಚೆಲ್ಲುವಂತಹ ಆಡಳಿತ ವರದಿಯನ್ನು ಮಂಡಿಸಲು ಆಗದಿರುವುದಕ್ಕೆ ಮೇಯರ್ ಹಾಗೂ ಉಪ ಮೇಯರ್ ಇಬ್ಬರೂ ವಿಷಾದ ವ್ಯಕ್ತಪಡಿಸಿದರು.
ಆಡಳಿತ ವರದಿ ಮಂಡಿಸುವುದು ಕೆಎಂಸಿ ಕಾಯ್ದೆಯ ಸೆಕ್ಷನ್ 61 (3)ರ ಪ್ರಕಾರ ಉಪ ಮೇಯರ್ ಅವರ ಹೊಣೆ. ಆದರೆ, ಉಪ ಮೇಯರ್ ಎನ್.ಇಂದಿರಾ ತಮ್ಮ ಅವಧಿಯಲ್ಲಿ ಆಡಳಿತ ವರದಿಯನ್ನು ಮಂಡನೆ ಮಾಡಲಿಲ್ಲ.
‘ಆಡಳಿತ ವರದಿಯನ್ನು ಮಂಡಿಸಲು ಅನುಮತಿ ನೀಡುವಂತೆ ಮೇಯರ್ ಅವರಿಗೆ ಪತ್ರ ಬರೆದಿದ್ದೆ’ ಎಂದು ಇಂದಿರಾ ಹೇಳಿದರು.
‘ವರದಿಯನ್ನು ಸಿದ್ಧಗೊಳಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿತ್ತು. ಲೋಕಸಭೆ ಚುನಾವಣೆಗೆ ಸಂಬಂಧಿಸಿದ ಕರ್ತವ್ಯದ ಮೇಲೆ ಅಧಿಕಾರಿಗಳು ನಿಯೋಜನೆಗೊಂಡ ಕಾರಣ ವರದಿ ಸಿದ್ಧಪಡಿಸುವುದು ವಿಳಂಬವಾಯಿತು.
ಈಗ ವರದಿ ಸಿದ್ಧವಾಗಿದ್ದರೂ ಕಳೆದ ಒಂದು ವಾರದಿಂದ ಹಬ್ಬ ಇರುವ ಕಾರಣ ಅದನ್ನು ಮುದ್ರಿಸುವುದು ಸಾಧ್ಯವಾಗಲಿಲ್ಲ’ ಎಂದು ಮೇಯರ್ ವಿವರಿಸಿದರು. ಹಲವು ವರ್ಷಗಳಿಂದ ಒಮ್ಮೆಯೂ ಆಡಳಿತ ವರದಿ ಮಂಡನೆಯಾಗಿಲ್ಲ. 2006ರಿಂದ 2008ರ ಅವಧಿಯಲ್ಲಿ ನಡೆದ ಸಾರ್ವಜನಿಕ ಕಾಮಗಾರಿಗಳಲ್ಲಿ ಹಲವು ಅವ್ಯವಹಾರಗಳು ನಡೆದ ಆರೋಪಗಳಿದ್ದು, ವರದಿ ಅವುಗಳ ಮೇಲೆ ಬೆಳಕು ಚೆಲ್ಲಲಿದೆ ಎಂಬುದು ಬಿಬಿಎಂಪಿಯ ಹಲವು ಸದಸ್ಯರ ಅಭಿಪ್ರಾಯವಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.