ಯಲಹಂಕ: ಬಾಗಲೂರು ಗ್ರಾಮದಿಂದ ಶಿವಾಜಿನಗರ (290 ಝಡ್) ಹಾಗೂ ಉತ್ತನಹಳ್ಳಿ ಗ್ರಾಮದಿಂದ ಶಿವಾಜಿನಗರ ಬಸ್ ನಿಲ್ದಾಣಕ್ಕೆ (282 ಎಚ್) ನೂತನ ಬಿಎಂಟಿಸಿ ಬಸ್ಗಳ ಸಂಚಾರ ಸೇವೆ ಈಚೆಗೆ ಆರಂಭಗೊಂಡಿತು.
ಸಾತನೂರು ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಬೆಂಗಳೂರು ಹಾಲು ಒಕ್ಕೂಟದ ಮಾಜಿ ನಿರ್ದೇಶಕ ಟಿ.ಎಂ.ಶ್ರೀರಾಮ್ ಚಾಲನೆ ನೀಡಿದರು. ಜಿಲ್ಲಾ ಪಂಚಾಯ್ತಿ ಸದಸ್ಯ ದಾನೇಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಅಂಜಿನಪ್ಪ, ಕಾಂಗ್ರೆಸ್ ಮುಖಂಡ ಸಾತನೂರು ರಾಜಣ್ಣ ಉಪಸ್ಥಿತರಿದ್ದರು.
ಮಾರ್ಗ: ಬಾಗಲೂರು- ಶಿವಾಜಿನಗರ ನಡುವಿನ ಬಸ್ಗಳು ಸಾತನೂರು, ರೇವಾ ಕಾಲೇಜು, ಹೆಗ್ಗಡೆನಗರ, ಥಣಿಸಂದ್ರ ಮತ್ತು ನಾಗವಾರ ಮಾರ್ಗವಾಗಿ ಸಂಚರಿಸಲಿವೆ. ಉತ್ತನಹಳ್ಳಿ- ಶಿವಾಜಿನಗರ ನಡುವಿನ ಬಸ್ ಹೊಸಹಳ್ಳಿ, ಹುಣಸಮಾರನಹಳ್ಳಿ, ಯಲಹಂಕ, ಹೆಬ್ಬಾಳ ಮತ್ತು ಆರ್.ಟಿ.ನಗರ ಮಾರ್ಗವಾಗಿ ಸಂಚರಿಸಲಿದೆ.