ಮಂಗಳೂರು: ಬರಗಾಲ ಪೀಡಿತ ಜಿಲ್ಲೆಗಳಿಗೆ ನೀರು ಹರಿಸುವ ಪ್ರಯತ್ನದ ಅಂಗವಾಗಿ ನೇತ್ರಾವತಿ ತಿರುವು ಯೋಜನೆಯನ್ನು ಕೈಗೆತ್ತಿಕೊಂಡರೆ ದಕ್ಷಿಣ ಕನ್ನಡ ಜಿಲ್ಲೆಯೇ ಬರಗಾಲ ಪ್ರದೇಶವಾಗಿ ಬದಲಾಗುವ ಅಪಾಯ ಇದೆ. ಹೀಗಾಗಿ ಬೆಂಗಳೂರು ಹೊರವ ಲಯದ ಕೆ.ಆರ್.ಪುರದ ಎಲೆಮಲ್ಲಪ್ಪ ಜಲಾಶ ಯದಿಂದ ಕೋಲಾರಕ್ಕೆ ನೀರು ಹರಿಸುವ ಯೋಜನೆಯನ್ನು ಸರ್ಕಾರ ರೂಪಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಬುಧವಾರ ಇಲ್ಲಿ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎಲೆಮಲ್ಲಪ್ಪ ಜಲಾಶಯದಿಂದ ಕೋಲಾರದ ಪಾಲಾರ್ ಜಲಾಶಯಕ್ಕೆ ಪೈಪ್ಲೈನ್ ಮೂಲಕ ನೀರು ಹರಿಸಿ ನೀರಿನ ಕೊರತೆ ನೀಗಿಸಬಹುದು. 32 ಕಿ.ಮೀ. ಉದ್ದದ ಈ ಪೈಪ್ಲೈನ್ ಕಾಮಗಾರಿಯನ್ನು ₨ 230 ಕೋಟಿ ವೆಚ್ಚದಲ್ಲಿ ಪೂರ್ಣಗೊಳಿಸಬಹುದು. ಈ ಯೋಜನೆ ಅನುಷ್ಠಾನಕ್ಕೆ ಯಾವುದೇ ತಾಂತ್ರಿಕ ತೊಂದರೆಗಳೂ ಇಲ್ಲ. ರಸ್ತೆ ಪಕ್ಕದಲ್ಲೇ ಪೈಪ್ಲೈನ್ ಅಳವಡಿಸಬಹುದು. ನೇತ್ರಾವತಿ ನದಿ ತಿರುವು ಯೋಜನೆಗೆ ₨10 ಸಾವಿರ ಕೋಟಿ ವೆಚ್ಚವಾಗಲಿದೆ’ ಎಂದು ಜನಾರ್ದನ ಪೂಜಾರಿ ಹೇಳಿದರು.