ಬೆಂಗಳೂರು: `ಕೃಷಿಯೇತರ ಉದ್ದೇಶಗಳಿಗಾಗಿ, ಬೆಂಗಳೂರು ನಗರದ ಕುಡಿಯುವ ನೀರಿನ ಬಳಕೆಗಾಗಿ ಕಾವೇರಿ ನದಿ ನೀರು ಸರಿಯಾಗಿ ಹಂಚಿಕೆಯಾಗಿಲ್ಲ. ಈ ಕುರಿತು ಸುಪ್ರೀಂ ಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಲಾಗುವುದು~ ಎಂದು ರಾಷ್ಟ್ರೀಯ ಕಿಸಾನ್ ಸಂಘದ ಅಧ್ಯಕ್ಷ ಪಿ.ರಾಮರೆಡ್ಡಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, `ಕಾವೇರಿ ನದಿಯಿಂದ ಬೆಂಗಳೂರಿಗೆ ವಿತರಣೆಯಾಗುತ್ತಿರುವ ನೀರು 19 ಟಿಎಂಸಿ. ಮುಂದೆ ನಗರದ ಜನಸಂಖ್ಯೆ ಹೆಚ್ಚಾದರೂ ಸಹ ಇದರ ಪ್ರಮಾಣ ಪರಿಷ್ಕರಣೆಯಾಗುವುದಿಲ್ಲ~ ಎಂದರು.
`ಕಾವೇರಿ ನದಿಯ ನೀರನ್ನು ತಮಿಳುನಾಡಿಗೆ ಬಿಡುತ್ತಿರುವುದನ್ನು ವಿರೋಧಿಸಿ ಅ.8 ರಂದು ಪುರಭವನದ ಮುಂದೆ ಪ್ರತಿಭಟನೆಯನ್ನು ನಡೆಸಲಾಗುವುದು~ ಎಂದರು.
`ಎಲ್ಲಾ ನದಿ ನೀರಿನ ವಿವಾದಗಳ ಕಾಯಂ ಇತ್ಯರ್ಥಕ್ಕಾಗಿ ರಾಷ್ಟ್ರೀಯ ಜಲ ನೀತಿಯನ್ನು ರೂಪಿಸಬೇಕು, ನದಿಯ ಹಂಚಿಕೆಯ ಬಗ್ಗೆ ಹೊಸ ಪ್ರಾಧಿಕಾರಗಳನ್ನು ರಚಿಸಬೇಕು~ ಎಂದು ಒತ್ತಾಯಿಸಿದರು. `ಎಲ್ಲ ಪ್ರಮುಖ ನದಿಗಳ ಜೋಡಣೆ ಕಾರ್ಯವನ್ನು ತೀವ್ರಗತಿಯಲ್ಲಿ ಕೈಗೊಂಡು ಆದಷ್ಟು ಬೇಗ ಪೂರ್ಣಗೊಳಿಸಬೇಕು. ಹಲವಾರು ಜನಪರ ತೀರ್ಮಾನಗಳನ್ನು ತಕ್ಷಣಕ್ಕೆ ಕೈಗೊಳ್ಳಬೇಕು~ ಎಂದರು.