ಮಹದೇವಪುರ: ರಾಮಗೊಂಡನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಆವರಣದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ದೇಹದಾರ್ಢ್ಯ ಸ್ಪರ್ಧೆಯಲ್ಲಿ ಪಿ.ಮುರುಳಿ ಪ್ರಥಮ ಸ್ಥಾನ ಗಳಿಸುವುದರೊಂದಿಗೆ ‘ಮಿಸ್ಟರ್ ರಾಕ್ಕ್ಲಾಸಿಕ್ 2011’ ಪ್ರಶಸ್ತಿಯನ್ನು ಮೂಡಿಗೆರಿಸಿಕೊಂಡರು. ಅತ್ಯುತ್ತಮ ಸ್ನಾಯು ಪ್ರದರ್ಶಕ ಪ್ರಶಸ್ತಿಯನ್ನು ದಾವಣಗೆರೆಯ ಇಸ್ಮಾಯಿಲ್ ಹಾಗೂ ಬೆಂಗಳೂರಿನ ಶಂಕರ ಪಡೆದುಕೊಂಡರು.
ಕಿರಿಯರ ವಿಭಾಗದಲ್ಲಿ ಚಂದ್ರಭಾನು ಮಲ್ಲಿಕ ಪ್ರಥಮ ಸ್ಥಾನ ಗಳಿಸಿದರು. ಕರ್ನಾಟಕ ರಾಜ್ಯ ಹವ್ಯಾಸಿ ದೇಹದಾರ್ಢ್ಯ ಸಮಿತಿಯ ಸಹಯೋಗದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧೆಡೆಯಿಂದ ಸುಮಾರು ಇನ್ನೂರಕ್ಕೂ ಹೆಚ್ಚು ದೇಹದಾರ್ಢ್ಯ ಪಟುಗಳು ಭಾಗವಹಿಸಿದ್ದರು.ಸ್ಪರ್ಧೆಯ ನಿರ್ಣಾಯಕರಾಗಿ ರಾಷ್ಟ್ರೀಯ ಬಾಡಿಬಿಲ್ಡಿಂಗ್ ಅಸೋಸಿಯೇಶನ್ನ ಖಜಾಂಚಿ ಕೃಷ್ಣರಾವ್, ಚಂದ್ರಮೌಳಿ, ಪಿ.ಎಸ್.ನಾಯ್ಡು ಹಾಗೂ ವೆಂಕಟೇಶ ಕಾರ್ಯನಿರ್ವಹಿಸಿದರು.
ವಿಜೇತರಿಗೆ ಶಾಸಕ ಅರವಿಂದ ಲಿಂಬಾವಳಿ ಮತ್ತು ಮಹದೇವಪುರ ಕ್ಷೇತ್ರದ ಬಿಜೆಪಿ ಘಟಕದ ಅಧ್ಯಕ್ಷ ಜಯಚಂದ್ರ ರೆಡ್ಡಿ ಬಹುಮಾನ ವಿತರಿಸಿದರು. ಪ್ರಧಾನ ಕಾರ್ಯದರ್ಶಿ ಎನ್.ಎ. ನಾರಾಯಣಸ್ವಾಮಿ, ಸಂಘಟಕರಾದ ಎಂ.ಶ್ರೀನಿವಾಸ್, ಯುವ ಮೋರ್ಚಾ ಅಧ್ಯಕ್ಷ ವಿಜಯಕುಮಾರ್, ಜೆ.ರಘು ಉಪಸ್ಥಿತರಿದ್ದರು.