ಬೆಂಗಳೂರು: ರಾಮನಗರ ಜಿಲ್ಲೆ ಕನಕಪುರ ತಾಲ್ಲೂಕಿನ ಹಾರೋಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ಅತ್ಯಾಧುನಿಕ ಪ್ರಾಣಿವಧಾ ಘಟಕ ಸ್ಥಾಪಿಸುವ ಉದ್ದೇಶವನ್ನು ಸರ್ಕಾರ ಕೈಬಿಡದಿದ್ದರೆ ತೀವ್ರ ಸ್ವರೂಪದ ಹೋರಾಟ ನಡೆಸಲಾಗುವುದು ಎಂದು ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಆನೇಕಲ್ ಮತ್ತು ಬೆಂಗಳೂರಿನ ಕಾಚರಕನಹಳ್ಳಿಯಲ್ಲಿ ಸ್ಥಳೀಯರು ವಿರೋಧ ಮಾಡಿದ ಕಾರಣಕ್ಕೆ ಹಾರೋಹಳ್ಳಿ ಬಳಿ ಕಸಾಯಿಖಾನೆ ತೆರೆಯಲು ಸರ್ಕಾರ ಮುಂದಾಗಿದೆ. ಹಾರೋಹಳ್ಳಿ ಮಾತ್ರವಲ್ಲ, ಎಲ್ಲಿಯೂ ಕಸಾಯಿಖಾನೆ ತೆರೆಯಬಾರದು ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಒತ್ತಾಯಿಸಿದರು.
ಈ ಉದ್ದೇಶಕ್ಕಾಗಿ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಗೆ 36 ಎಕರೆ ಜಾಗವನ್ನು ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಹಸ್ತಾಂತರಿಸಲಾಗುತ್ತಿದೆ. ದಿನಕ್ಕೆ 400 ಹಸುಗಳು, 4 ಸಾವಿರ ಕುರಿ, 100 ಹಂದಿಗಳನ್ನು ವಧೆ ಮಾಡಲು ಸರ್ಕಾರವೇ ಅವಕಾಶ ಕಲ್ಪಿಸುತ್ತಿರುವುದು ಖಂಡನೀಯ ಎಂದರು.