ಬೆಂಗಳೂರು: ಪೀಣ್ಯದಿಂದ ಮಲ್ಲೇಶ್ವರದ ಸಂಪಿಗೆ ರಸ್ತೆವರೆಗಿನ 10.43 ಕಿ.ಮೀ. ಉದ್ದದ ಮಾರ್ಗದಲ್ಲಿ ‘ನಮ್ಮ ಮೆಟ್ರೊ’ ರೈಲಿನ ಸಾರ್ವಜನಿಕ ಸಂಚಾರವು ಫೆಬ್ರುವರಿಯಲ್ಲಿ ಪ್ರಾರಂಭವಾಗುವ ಸಾಧ್ಯತೆ ಇದೆ ಎಂದು ‘ಬೆಂಗಳೂರು ಮೆಟ್ರೊ ರೈಲು ನಿಗಮ’ದ ವ್ಯವಸ್ಥಾಪಕ ನಿರ್ದೇಶಕ ಪ್ರದೀಪ್ ಸಿಂಗ್ ಖರೋಲ ವಿಶ್ವಾಸ ವ್ಯಕ್ತಪಡಿಸಿದರು.
ಬಿಎಂಟಿಸಿ ನೌಕರರ ಪತ್ತಿನ (ಸಾಲ) ಸಹಕಾರ ಸಂಘದ ವತಿಯಿಂದ ಬುಧವಾರ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಬಳಿಕ ಅವರು ವರದಿಗಾರರೊಂದಿಗೆ ಮಾತನಾಡಿದರು.
‘ಎರಡು ತಿಂಗಳಿಂದ ಈ ಮಾರ್ಗದಲ್ಲಿ ಪರೀಕ್ಷಾರ್ಥ ಸಂಚಾರ ನಡೆದಿದೆ. ಲಖನೌದ ವಿನ್ಯಾಸ ಸಂಶೋಧನೆ ಮತ್ತು ಮಾನಕಗಳ ಸಂಸ್ಥೆಯು (ಆರ್ಡಿಎಸ್ಒ) ಕೈಗೊಂಡ ವಿವಿಧ ಬಗೆಯ ಪರೀಕ್ಷಾರ್ಥ ಸಂಚಾರ ಯಶಸ್ವಿಯಾಗಿ ಪೂರ್ಣಗೊಂಡಿದೆ’ ಎಂದು ಅವರು ತಿಳಿಸಿದರು.
‘ಈ ಮಾರ್ಗದಲ್ಲಿ ರೈಲು ಸಂಚಾರ ಪ್ರಾರಂಭವಾದರೆ ಮೆಜೆಸ್ಟಿಕ್ ಸಮೀಪಕ್ಕೆ ಮೆಟ್ರೊ ಸಂಪರ್ಕ ಒದಗಿಸಿದಂತಾ-ಗುತ್ತದೆ. ಮಂತ್ರಿ ಮಾಲ್ ಬಳಿಯ ನಿಲ್ದಾಣದಿಂದ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಮಹಾನಗರ ಸಾರಿಗೆ ಸಂಸ್ಥೆ ಮತ್ತು ನಗರ ರೈಲು ನಿಲ್ದಾಣಗಳಿಗೆ ಉಳಿಯುವ ಅಂತರ 800 ಮೀಟರ್ ಮಾತ್ರ. ಪೂರ್ವ– ಪಶ್ಚಿಮ ಮತ್ತು ಉತ್ತರ– ದಕ್ಷಿಣ ಕಾರಿಡಾರ್ಗಳ ಸುರಂಗ ಮಾರ್ಗ ಪೂರ್ಣಗೊಂಡ ಮೇಲೆ ನಗರದ ನಾಲ್ಕೂ ದಿಕ್ಕಿಗೂ ಮೆಟ್ರೊ ಸಂಪರ್ಕ ಏರ್ಪಡುತ್ತದೆ’ ಎಂದು ಅವರು ತಿಳಿಸಿದರು.