ಬೆಂಗಳೂರು: ಕೆಜೆಪಿ ಸಾರಥ್ಯ ವಹಿಸಿರುವ ಬಿ.ಎಸ್.ಯಡಿಯೂರಪ್ಪ ಜೊತೆ ಬಹಿರಂಗವಾಗಿ ಗುರುತಿಸಿಕೊಂಡಿರುವ ಬಿಜೆಪಿ ಶಾಸಕರನ್ನು ಪಕ್ಷದಿಂದ ಉಚ್ಚಾಟಿಸಬೇಕು ಎಂದು ಶಾಸಕ ಬೇಳೂರು ಗೋಪಾಲಕೃಷ್ಣ ಒತ್ತಾಯಿಸಿದರು.
ಶನಿವಾರ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಬಿಜೆಪಿಯ ಅನ್ನ ತಿಂದು, ಕೆಜೆಪಿಗೆ ಒಳ್ಳೆಯ ಭವಿಷ್ಯ ಇದೆ ಎನ್ನುತ್ತಿರುವ ಸಹಕಾರ ಸಚಿವ ಬಿ.ಜೆ.ಪುಟ್ಟಸ್ವಾಮಿ ಹಾಗೂ ಯಡಿಯೂರಪ್ಪ ಬೆಂಬಲಿಗ ಇತರ ಸಚಿವರನ್ನು ಸಂಪುಟದಿಂದ ಕೈಬಿಡಬೇಕು' ಎಂದರು.
`ತಮ್ಮ ಬೆಂಬಲಕ್ಕೆ 70ರಿಂದ 80 ಶಾಸಕರು ಎನ್ನುತ್ತಿದ್ದ ಯಡಿಯೂರಪ್ಪ ಶಕ್ತಿ ಏನು ಎಂಬುದು ಶುಕ್ರವಾರ ಗೊತ್ತಾಗಿದೆ. ಮುಂದೆ ಏಳೆಂಟು ಮಂದಿಯೂ ಅವರೊಂದಿಗೆ ಇರುವುದಿಲ್ಲ. ಎಲ್ಲರ ಬೆನ್ನಿಗೂ ಚೂರಿ ಹಾಕಿದ ಕಾರಣ ಅವರಿಂದ ಒಬ್ಬೊಬ್ಬರೇ ದೂರ ಸರಿದರು' ಎಂದರು.
ತಾವು ಮುಖ್ಯಮಂತ್ರಿಯಾಗಿದ್ದಾಗ ಅಭಿವೃದ್ಧಿ ಪಥದಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿತ್ತು ಎಂದು ಯಡಿಯೂರಪ್ಪ ಹೇಳುತ್ತಾರೆ. ಆದರೆ, ಆಗ ಕರ್ನಾಟಕ ಮುಂಚೂಣಿಯಲ್ಲಿ ಇದ್ದಿದ್ದು ಭ್ರಷ್ಟಾಚಾರದಲ್ಲಿ ಎಂದು ವಾಗ್ದಾಳಿ ನಡೆಸಿದರು.
ಅಪ್ಪ ಮಕ್ಕಳ ಪಕ್ಷ
ಜೆಡಿಎಸ್ ಅಪ್ಪ-ಮಕ್ಕಳ ಪಕ್ಷ ಎಂದು ಯಡಿಯೂರಪ್ಪ ಟೀಕಿಸುತ್ತಿದ್ದರು. ಕೆಜೆಪಿ ಕೂಡ ಅಪ್ಪ-ಮಕ್ಕಳ ಪಕ್ಷವೇ. ಎಡಕ್ಕೆ ರಾಘವೇಂದ್ರ, ಬಲಕ್ಕೆ ವಿಜಯೇಂದ್ರ ಇರುತ್ತಾರೆ
-ಬೇಳೂರು ಗೋಪಾಲಕೃಷ್ಣ