ಯಲಹಂಕ: ಇಲ್ಲಿನ ಪೊಲೀಸ್ ಠಾಣೆ ವೃತ್ತ ಅಥವಾ ಎನ್ಇಎಸ್ ವೃತ್ತದಲ್ಲಿ ಅಂಬೇಡ್ಕರ್ರವರ ಕಂಚಿನ ಪ್ರತಿಮೆಯನ್ನು ಸ್ಥಾಪಿಸಬೇಕು ಎಂದು ಒತ್ತಾಯಿಸಿ, ದಲಿತ ಸಂಘರ್ಷ ಸಮಿತಿ (ಸಮತಾವಾದ)ಕಾರ್ಯಕರ್ತರು ಬ್ಯಾಟರಾಯನಪುರದ ಬಿಬಿಎಂಪಿ ಜಂಟಿ ಆಯುಕ್ತರ ಕಚೇರಿ ಮುಂಭಾಗದಲ್ಲಿ ತಮಟೆ ಚಳವಳಿ ನಡೆಸಿದರು.
ಎನ್ಇಎಸ್ ವೃತ್ತದಿಂದ ಕಾಲ್ನಡಿಗೆ ಜಾಥಾದಲ್ಲಿ ತೆರಳಿದ ಪ್ರತಿಭಟನಾಕಾರರು ಬಿಬಿಎಂಪಿ ಕಚೇರಿ ಮುಂಭಾಗದಲ್ಲಿ ಸಭೆ ನಡೆಸಿದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ಸಮಿತಿಯ ರಾಜ್ಯ ಉಪ ಪ್ರಧಾನ ಸಂಚಾಲಕ ಎಚ್.ಮಾರಪ್ಪ, ಅಂಬೇಡ್ಕರ್ರವರ ಪ್ರತಿಮೆಯನ್ನು ಸ್ಥಾಪಿಸುವ ಸಂಬಂಧ ಇತ್ತೀಚೆಗೆ ನಗರ ಮತ್ತು ಗ್ರಾಮಾಂತರ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಾವಿರಾರು ಕಾರ್ಯಕರ್ತರಿಂದ ಮುಖ್ಯಮಂತ್ರಿಗಳಿಗೆ ಮನವಿಯನ್ನು ಸಲ್ಲಿಸಲಾಗಿದೆ.
ಪ್ರತಿಮೆಗೆ ರೂ. 18 ಲಕ್ಷ ರೂಪಾಯಿ ಅಂದಾಜು ವೆಚ್ಚದಲ್ಲಿ ಪಟ್ಟಿಯನ್ನು ತಯಾರಿಸಿದ್ದರೂ ಸಹ, ಸರ್ಕಾರ ಇದುವರೆಗೆ ಪ್ರತಿಮೆಯನ್ನು ಸ್ಥಾಪಿಸದೆ ಮೀನಾಮೇಷ ಎಣಿಸುತ್ತಿರುವುದನ್ನು ಗಮನಿಸಿದರೆ ಸರ್ಕಾರಕ್ಕೆ ಅಂಬೇಡ್ಕರ್ ಮತ್ತು ದಲಿತರ ಬಗ್ಗೆ ಇರುವ ನಿರ್ಲಕ್ಷ್ಯವನ್ನು ಎತ್ತಿ ತೋರಿಸುತ್ತದೆ ಎಂದು ದೂರಿದರು.
ಮನವಿ ಸ್ವೀಕರಿಸಿದ ಬಿಬಿಎಂಪಿ ಕೇಂದ್ರ ಕಚೇರಿಯ ಮುಖ್ಯ ಎಂಜಿನಿಯರ್ ರಮೇಶ್ ಹಾಗೂ ಜಂಟಿ ಆಯುಕ್ತ ರಾಮಚಂದ್ರಮೂರ್ತಿ ಅವರು, ಪ್ರತಿಮೆ ನಿರ್ಮಿಸಲು ರೂ. 9.98 ಲಕ್ಷ ಅನುದಾನ ಬಿಡುಗಡೆ ಮಾಡುವ ಸಂಬಂಧ ಈಗಾಗಲೆ ಪಾಲಿಗೆ ಸಾಮಾಜಿಕ ನ್ಯಾಯ ಸ್ಥಾಯಿಸಮಿತಿಯಿಂದ ಅನುಮೋದನೆಗೊಂಡು ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಆಗಸ್ಟ್ 3ರಂದು ಬಿಡ್ಗಳನ್ನು ತೆರೆದ ನಂತರ ಸ್ಥಳ ಪರಿಶೀಲನೆ ನಡೆಸಿ ನಿಯಮಾನುಸಾರ ಪ್ರತಿಮೆ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಸಮಿತಿಯ ರಾಜ್ಯ ಪ್ರಧಾನ ಸಂಚಾಲಕ ಕೆ.ತಮ್ಮಯ್ಯ, ನಗರ ಜಿಲ್ಲಾ ಪ್ರಧಾನ ಸಂಚಾಲಕ ಎಂ.ಸಿ.ನಾರಾಯಣ್, ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಸಂಚಾಲಕ ಎಲ್.ಎಂ. ಮುನಿಭೈರಪ್ಪ, ಮುಖಂಡರಾದ ಟಿ.ಚಂದ್ರಪ್ಪ, ಗುರು ಸ್ವಾಮಿ, ಡಿ.ವಿ.ವೀರಭದ್ರೇಗೌಡ ಇತರರು ಭಾಗವಹಿಸಿದ್ದರು.