ಬೆಂಗಳೂರು: ‘ದೇಶದಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ ವ್ಯವಸ್ಥೆಯನ್ನು ಹೋಗಲಾಡಿಸಲು ಯುವ ಮತದಾರರಿಂದ ಮಾತ್ರ ಸಾಧ್ಯ’ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಎಂ.ಎನ್.ವೆಂಕಟಾಚಲಯ್ಯ ಅಭಿಪ್ರಾಯಪಟ್ಟರು.
‘ಪಬ್ಲಿಕ್ ಅಫೇರ್ಸ್ ಸೆಂಟರ್’ ನಗರದಲ್ಲಿ ಸೋಮವಾರ ಆಯೋಜಿಸಿದ್ದ ಅಂತರರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದೆಹಲಿಯ ವಿಧಾನಸಭಾಕ್ಷೇತ್ರದ ಚುನಾವಣೆಯಲ್ಲಿ ಹಣ, ಹೆಂಡದ ಆಮಿಷವಿಲ್ಲದೇ ಆಮ್ ಆದ್ಮಿ ಪಕ್ಷವು 28 ಸ್ಥಾನಗಳಿಸಲು ಸಾಧ್ಯವಾಗಿರುವುದು ಯುವ ಮತದಾರರಿಂದಲೇ. ಇದೊಂದು ಐತಿಹಾಸಿಕ ಕ್ಷಣ’ ಎಂದು ಬಣ್ಣಿಸಿದರು.
‘ಸಾಮಾಜಿಕ ಕಾರ್ಯಕರ್ತರು, ಹಿರಿಯ ಪತ್ರಕರ್ತರು ಹಾಗೂ ನಾಗರಿಕ ಹಕ್ಕಿಗಾಗಿ ದುಡಿಯುವ ಸಂಘಟನೆಗಳ ಸದಸ್ಯರನ್ನು ಒಳಗೊಂಡ ಸಮಿತಿಯನ್ನು ಜಿಲ್ಲೆಗಳಲ್ಲಿ ರಚಿಸಬೇಕು. ಗ್ರಾಮ ಹಾಗೂ ಜಿಲ್ಲೆಗಳಲ್ಲಿ ಭ್ರಷ್ಟಾಚಾರಕ್ಕೆ ಸಂಬಂಧಿಸಿದ ದೂರುಗಳನ್ನು ಆಲಿಸಿ, ಲೋಕಾಯುಕ್ತ ಸಂಸ್ಥೆ ಗಮನಕ್ಕೆ ತರುವ ಕಾರ್ಯವನ್ನು ಈ ಸಮಿತಿ ಮಾಡಬೇಕು. ಈ ಬಗ್ಗೆ ಲೋಕಾಯುಕ್ತರೊಂದಿಗೆ ಸದ್ಯದಲ್ಲೇ ಚರ್ಚೆ ನಡೆಸಲಿದ್ದೇನೆ’ ಎಂದು ತಿಳಿಸಿದರು.
‘ರಾಜಕೀಯ ಹಾಗೂ ಚುನಾವಣೆ ವ್ಯವಸ್ಥೆಗಳೆರಡೂ ಶೀಘ್ರಗತಿಯಲ್ಲಿ ಬದಲಾಗಬೇಕು. ಇಲ್ಲವಾದರೆ ದೇಶ ನಿರೀಕ್ಷಿತ ಪ್ರಮಾಣದಲ್ಲಿ ಮುಂದುವರಿಯಲು ಸಾಧ್ಯವಾಗುವುದಿಲ್ಲ. ವಿಜ್ಞಾನ ಹಾಗೂ ಸಂಶೋಧನೆಯೆಡೆಗೆ ಮಕ್ಕಳನ್ನು ಸೆಳೆಯುವುದರ ಜತೆಗೆ ನೈತಿಕ ಪ್ರಜ್ಞೆಯನ್ನು ಬೆಳೆಸಬೇಕಿದೆ’ ಎಂದು ಸಲಹೆ ನೀಡಿದರು.
ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು. ಸೆಂಟರ್ ಸಂಸ್ಥಾಪಕ ಡಾ.ಸ್ಯಾಮುಯೆಲ್ ಪೌಲ್ ಉಪಸ್ಥಿತರಿದ್ದರು.