ಬೆಂಗಳೂರು: ಸೆಂಟ್ರಲ್ ಸಿಲ್ಕ್ ಬೋರ್ಡ್ ಸಮೀಪದ ಆಟೊ ನಿಲ್ದಾಣದಲ್ಲಿ ಕುಶ (30) ಎಂಬಾತನನ್ನು ಮಂಗಳವಾರ ರಾತ್ರಿ ಕೊಲೆಗೈಯಲಾಗಿದೆ.
ಜೆ.ಪಿ.ನಗರ ಸಮೀಪ ಮಾರೇನಹಳ್ಳಿ ನಿವಾಸಿಯಾಗಿದ್ದ ಆತ, ರೌಡಿಶೀಟರ್ ಆಗಿದ್ದ. ಆತನ ಸಹೋದರ ಲವ ಸಹ ರೌಡಿಶೀಟರ್ ಎಂದು ಮೈಕೊ ಲೇಔಟ್ ಪೊಲೀಸರು ತಿಳಿಸಿದರು.
ಆಟೊ ಓಡಿಸುತ್ತಿದ್ದ ಕುಶ, ರಾತ್ರಿ 1.30 ಗಂಟೆ ಸುಮಾರಿಗೆ ಪ್ರಯಾಣಿಕರಿಗಾಗಿ ಕಾಯುತ್ತ ನಿಲ್ದಾಣದಲ್ಲಿ ನಿಂತುಕೊಂಡಿದ್ದ. ಈ ವೇಳೆ ಆಟೊದಲ್ಲಿ ಬಂದಿದ್ದ ಐವರು ದುಷ್ಕರ್ಮಿಗಳು, ಮಾರಕಾಸ್ತ್ರಗಳಿಂದ ಹೊಡೆದಿದ್ದರು. ಸ್ಥಳದಲ್ಲೇ ಕುಸಿದು ಬಿದ್ದ ಕುಶ, ರಕ್ತಸ್ರಾವವಾಗಿ ಮೃತಪಟ್ಟಿದ್ದಾನೆ ಎಂದರು.
ಕೃತ್ಯವೆಸಗಿ ಆರೋಪಿಗಳು ಪರಾರಿಯಾಗಿದ್ದಾರೆ. ಹಳೇ ದ್ವೇಷದಿಂದಾಗಿ ಈ ಕೃತ್ಯ ಎಸಗಿರುವ ಶಂಕೆ ಇದೆ. ಘಟನಾ ಸ್ಥಳದ ಸುತ್ತಮುತ್ತಲಿನ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗುತ್ತಿದೆ ಎಂದರು.