ಬೆಂಗಳೂರು: ‘ಬದಲಾಗುತ್ತಿರುವ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿ ಕುಟುಂಬ ವ್ಯವಸ್ಥೆಯಲ್ಲೂ ಬದಲಾವಣೆಗೆ ಕಾರಣವಾಗಿದೆ. ಇಂತಹ ಸನ್ನಿವೇಶದಲ್ಲಿ ಬದುಕಿನ ಮುಸ್ಸಂಜೆಯಲ್ಲಿರುವ ವೃದ್ಧರಿಗೆ ಗೌರವಯುತ ಜೀವನ ನಡೆಸಲು ವೃದ್ಧಾಶ್ರಮಗಳು ಅನಿವಾರ್ಯವಾಗಿವೆ’ ಎಂದು ವಿಧಾನ ಪರಿಷತ್ತಿನ ಸಭಾಪತಿ ಡಿ.ಎಚ್. ಶಂಕರಮೂರ್ತಿ ಅಭಿಪ್ರಾಯಪಟ್ಟರು.
ನಗರದ ನಿರ್ಮಾಣ್ ಶೆಲ್ಟರ್ಸ್ ಆಶ್ರಯದ ವಿ.ಎಲ್.ಎನ್ ಪ್ರಬುದ್ಧಾಲಯದ ಒಂಬತ್ತನೇ ವಾರ್ಷಿಕೋತ್ಸವದ ಅಂಗವಾಗಿ ನಿಸರ್ಗ ಬಡಾವಣೆಯ ಐವರು ಹಿರಿಯರಿಗೆ ವಿಎಲ್ಎನ್ ಹಿರಿಯ ನಾಗರಿಕರ ಆಜೀವ ಸಾಧನಾ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
‘ವೃದ್ಧಾಶ್ರಮಗಳಿಗೆ ಕುಟುಂಬದ ಹಿರಿಯ ಜೀವಗಳನ್ನು ಕಳಿಸುವುದು ಸರಿ ಅಥವಾ ತಪ್ಪು ಎಂದು ಪರಾಮರ್ಶೆ ಮಾಡುವುದಕ್ಕಿಂತ ಬದುಕಿನ ವಾಸ್ತವಗಳನ್ನು ಅರಿತುಕೊಳ್ಳಬೇಕಾಗಿದೆ’ ಎಂದರು.
ನಿರ್ಮಾಣ್ ಸಮೂಹ ಸಂಸ್ಥೆಗಳ ಸಂಸ್ಥಾಪಕ ವಿ. ಲಕ್ಷ್ಮಿನಾರಾಯಣ್ ಮಾತನಾಡಿ, ‘ಈ ಪ್ರಶಸ್ತಿ ತಲಾ ₹ 10,000 ನಗದು, ಸ್ಮರಣ ಫಲಕ ಒಳಗೊಂಡಿದೆ’ ಎಂದು ಅವರು ಹೇಳಿದರು.