ಬೆಂಗಳೂರು: ರಾಜ್ಯದ ಆಡಳಿತದ ಶಕ್ತಿ ಕೇಂದ್ರ ವಿಧಾನಸೌಧ ಮತ್ತು ವಿಕಾಸಸೌಧ ಕಟ್ಟಡಗಳಲ್ಲಿನ ಅವ್ಯವಸ್ಥೆ ಮತ್ತು ನಿರ್ವಹಣೆ ಬಗ್ಗೆ ಸ್ವತಃ ವಾರ್ತಾ ಸಚಿವ ಆರ್. ರೋಷನ್ಬೇಗ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿರುವ ಅವರು, ಈ ಎರಡು ಕಟ್ಟಡಗಳ ಆವರಣ ಎಲ್ಲ ದೃಷ್ಟಿಕೋನದಿಂದಲೂ ಮಾದರಿ ಯಾಗಿರಬೇಕು. ಈ ನಿಟ್ಟಿನಲ್ಲಿ ಅಗತ್ಯ ಸುಧಾರಣೆ ಕ್ರಮಗಳನ್ನು ಕೈಗೊಂಡು ಕಟ್ಟಡಗಳ ಸೌಂದರ್ಯ ಕಾಪಾಡಬೇಕು ಎಂದು ತಿಳಿಸಿದ್ದಾರೆ.
ಈ ಕಟ್ಟಡಗಳ ಕಾರಿಡಾರ್ನಲ್ಲಿ ಅನುಪಯುಕ್ತ ಪೀಠೋಪಕರಣಗಳನ್ನು ಇಡಲಾಗಿದೆ. ಇಂತಹ ಪೀಠೋಪಕರಣಗಳು ಕಟ್ಟಡಗಳ ಸೌಂದರ್ಯಕ್ಕೆ ಧಕ್ಕೆ ಉಂಟು ಮಾಡುತ್ತಿವೆ. ಸಾರ್ವಜನಿಕರ ಉಪಯೋಗಕ್ಕೆ ಇಟ್ಟಿರುವ ಕುರ್ಚಿಗಳು ತುಂಬಾ ಹಳೆಯದಾಗಿವೆ. ಉತ್ತಮ ಗುಣಮಟ್ಟದ ಹೊಸದಾದ ಸುಂದರ ಕುರ್ಚಿಗಳನ್ನು ಅಳವಡಿಸುವುದರಿಂದ ಕಟ್ಟಡದ ಸೌಂದರ್ಯ ಹೆಚ್ಚುತ್ತದೆ ಮತ್ತು ಸಾರ್ವಜನಿಕರಿಗೂ ಉಪಯೋಗವಾಗುತ್ತದೆ. ಅಗತ್ಯವಿರುವ ಸ್ಥಳಗಳಲ್ಲಿ ಒಂದೇ ಮಾದರಿಯ ಕುರ್ಚಿಗಳನ್ನು ಅಳವಡಿಸುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿದ್ದಾರೆ.