ಬೆಂಗಳೂರು: `ಶಾಸ್ತ್ರೀಯ ಸಂಗೀತ ಜನಪ್ರಿಯವಾಗುವಲ್ಲಿ ಆಕಾಶವಾಣಿಯ ಕೊಡುಗೆ ಅಪಾರವಾದುದು' ಎಂದು ವೇಣುವಾದಕ ಜಿ.ರಾಜನಾರಾಯಣ್ ಹೇಳಿದರು.
ದೂರದರ್ಶನ, ಆಕಾಶವಾಣಿ ಮತ್ತು ಭಾರತೀಯ ವಿದ್ಯಾ ಭವನದ ವತಿಯಿಂದ ನಗರದಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಆಕಾಶವಾಣಿ ಸಂಗೀತ ಸ್ಪರ್ಧೆಯ ವಿಜೇತರಿಗೆ ಅವರು ಬಹುಮಾನ ವಿತರಿಸಿ ಮಾತನಾಡಿದರು.
`ಸಂಗೀತ ಲೋಕಕ್ಕೆ ಸಾವಿರಾರು ಹೊಸ ಪ್ರತಿಭೆಗಳನ್ನು ಪರಿಚಯಿಸಿದ ಹಿರಿಮೆ ಆಕಾಶವಾಣಿಗೆ ಸಲ್ಲುತ್ತದೆ. ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಲು ನಿರಂತರ ಪ್ರಯತ್ನಬೇಕು. ಸಂಗೀತ ಕಲಾವಿದರು ಗುರುಗಳ ಮಾರ್ಗದರ್ಶನದ ಜತೆಗೆ ಸ್ವಂತಿಕೆಯನ್ನು ಬೆಳೆಸಿಕೊಳ್ಳುವುದು ಅಗತ್ಯ' ಎಂದು ಸಲಹೆ ನೀಡಿದರು.
ಆಕಾಶವಾಣಿ ಮತ್ತು ದೂರರ್ಶನದ ದಕ್ಷಿಣ ವಲಯದ ಹೆಚ್ಚುವರಿ ಮಹಾನಿರ್ದೇಶಕ ಜಯಲಾಲ್ ಅಧ್ಯಕ್ಷತೆ ವಹಿಸಿ, `ಸಂಗೀತ ಕ್ಷೇತ್ರಕ್ಕೆ ಆಕಾಶವಾಣಿ ಮತ್ತು ದೂರದರ್ಶನ ನೀಡಿದ ಕೊಡುಗೆಯನ್ನು ಸರಿಗಟ್ಟಲು ಯಾವ ಮಾಧ್ಯಮದಿಂದಲೂ ಸಾಧ್ಯವಾಗಿಲ್ಲ' ಎಂದರು.