ಹಾವೇರಿ: ಗಣರಾಜ್ಯೋತ್ಸವದ ದಿನವಾದ ಸೋಮವಾರ ರಾಷ್ಟ್ರಧ್ವಜಾರೋಹಣ ಮಾಡಿ, ರಾಷ್ಟ್ರಗೀತೆ ಹಾಡಿದ ವಧು–ವರರು ನಂತರ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸಂಭ್ರಮಕ್ಕೆ ನಗರದ ಶಿವಬಸವ ಕಲ್ಯಾಣಮಂಟಪ ಸಾಕ್ಷಿಯಾಯಿತು.
ಸವಣೂರ ತಾಲ್ಲೂಕು ಕಳಸೂರ ಗ್ರಾಮದ ಶ್ರೀಕಾಂತಪ್ಪ ಬನ್ನಿಕೊಪ್ಪ ಅವರ ಮಗಳು ಪ್ರಿಯಾಂಕಾ ಮತ್ತು ಬೆಳಗಾವಿ ಜಿಲ್ಲೆ ಗೋಕಾಕ ಪಟ್ಟಣದ ಆದರ್ಶ ಹಸಮಣೆ ಏರಿದ ಜೋಡಿ. ಸಂಪ್ರದಾಯದಂತೆ ವಿಧಿ- ವಿಧಾನ ಪೂರೈಸಿದ ಬಳಿಕ ವಧು–ವರರು ಕಲ್ಯಾಣ ಮಂಟಪದ ಎದುರಿಗೆ ಧ್ವಜಾರೋಹಣ ನೆರವೇರಿಸಿದರು.
ನಂತರ ರಾಷ್ಟ್ರಗೀತೆ ಹಾಡಿ ಗೌರವ ಸಲ್ಲಿಸಿದರು. ಬಳಿಕ ಮದುವೆ ವಿಧಿ–ವಿಧಾನಗಳು ಮುಂದುವರಿಸಿ, ದಾಂಪತ್ಯಕ್ಕೆ ಕಾಲಿಟ್ಟರು. ಅಷ್ಟು ಮಾತ್ರವಲ್ಲ, ಮದುವೆಗೆ ಬಂದ ಅತಿಥಿಗಳಿಗೆ ಗುಲಾಬಿ ಗಿಡಗಳನ್ನು ನೀಡುವ ಮೂಲಕ ಪರಿಸರ ಜಾಗೃತಿಯನ್ನೂ ಮೂಡಿಸಿದರು.