ಬೆಂಗಳೂರು: ‘ಅತಿ ಹೆಚ್ಚು ಸುಳ್ಳು ಹೇಳುವ ಹಾಗೂ ಭ್ರಷ್ಟ ಪಕ್ಷವೆಂದರೆ ಅದು ಬಿಜೆಪಿ’ ಎಂದು ಜೆಡಿಎಸ್ ಮುಖಂಡ ಎಸ್. ಮಂಜುನಾಥ್ ಟೀಕಿಸಿದರು.
ಹೆಸರಘಟ್ಟ ಮುಖ್ಯರಸ್ತೆಯಲ್ಲಿರುವ ಲಕ್ಷ್ಮೀಪುರದಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದ್ದ ಬೈಕ್ ರ್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಾಲಿಕೆಯ ಬಿಜೆಪಿ ಸದಸ್ಯರು ಜನರ ಹಿತಾಸಕ್ತಿಯನ್ನು ಬಲಿಕೊಟ್ಟು, ಬಡಾವಣೆಗಳನ್ನು ನಿರ್ಮಿಸುವುದರಲ್ಲೇ ಕಾಲಕಳೆಯುತ್ತಿದ್ದಾರೆ. ಚಿಕ್ಕಬಾಣಾವರ ಕೆರೆ ಗಬ್ಬು ನಾರುತ್ತಿದೆ. ಕೊಳೆಗೇರಿ ಜಾಗವನ್ನು ಲೂಟಿ ಮಾಡಲು ಸಂಚು ನಡೆಯುತ್ತಿದೆ ಎಂದು ಆರೋಪಿಸಿದರು.
ಪ್ರಧಾನಿ ನರೇಂದ್ರ ಮೋದಿ ಕಪ್ಪು ಹಣವನ್ನು ತಂದು ಎಲ್ಲರಿಗೂ ಹಂಚುತ್ತೇನೆ ಎಂದಿದ್ದರು. ಇಲ್ಲಿಯ ತನಕ ಯಾರಿಗೂ ಹಂಚಿಲ್ಲ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ನೀರಾವರಿಗೆ ಹಣ ಬಿಡುಗಡೆ ಮಾಡುತ್ತೇನೆ ಎಂದು ಈಗ ಮತ್ತೆ ಬರುಡೆ ಬಿಡುತ್ತಿದ್ದಾರೆ ಎಂದು ತಿಳಿಸಿದರು.
‘ಹತ್ತು ವರ್ಷಗಳಿಂದ ದಾಸರಹಳ್ಳಿಯಲ್ಲಿ ಕ್ಷೇತ್ರದಲ್ಲಿ ರಸ್ತೆಗಳು ಅಭಿವೃದ್ದಿಯಾಗಿಲ್ಲ. ಕ್ಷೇತ್ರದಲ್ಲಿ ಗುದ್ದಲಿ ಪೂಜೆಯಾದ ಸಾಕಷ್ಟು ಕಾಮಗಾರಿಗಳು ಪೂರ್ಣಗೊಂಡಿಲ್ಲ’ ಎಂದು ದಾಸರಹಳ್ಳಿ ಕ್ಷೇತ್ರದ ಜೆಡಿಎಸ್ ಅಧ್ಯಕ್ಷ ಮುನಿಸ್ವಾಮಿ ಅವರು ವ್ಯಂಗ್ಯವಾಡಿದರು.