ಬೆಂಗಳೂರು: ನಾರಾಯಣ ಹೃದಯಾಲಯ ಮತ್ತು ಮಜುಮ್ದಾರ್ ಷಾ ಕ್ಯಾನ್ಸರ್ ಸೆಂಟರ್ ಸೇರಿಕೊಂಡು ಕರ್ನಾಟಕದಲ್ಲಿ ಇದೇ ಪ್ರಥಮ ಬಾರಿಗೆ ಮೂಲ ಜೀವಕೋಶ ವರ್ಗಾವಣೆ ಮಾಡುವ ಮೂಲಕ ರಕ್ತ ಕ್ಯಾನ್ಸರ್ನಿಂದ ಬಳಲುತ್ತಿದ್ದ 6 ತಿಂಗಳ ಹೆಣ್ಣು ಶಿಶುವಿನ ಪ್ರಾಣ ಉಳಿಸಲಾಗಿದೆ.
ಈ ಕುರಿತು ಸೋಮವಾರ ನಗರದ ಪತ್ರಿಕಾಗೋಷ್ಠಿಯಲ್ಲಿ ನಾರಾಯಣ ಹೃದಯಾಲಯ ಮತ್ತು ಮಜುಮ್ದಾರ್ ಷಾ ಕ್ಯಾನ್ಸರ್ ಸೆಂಟರ್ನ ರಕ್ತಮಜ್ಜೆ ಟ್ರಾನ್ಸ್ಪ್ಲಾಂಟ್ ಯೂನಿಟ್ ಮುಖ್ಯಸ್ಥ ಡಾ.ಶರತ್ ದಾಮೋದರ್ ಮಾತನಾಡಿ, `ಚಿಕ್ಕ ವಯಸ್ಸಿನಲ್ಲಿ ಕಾಣಿಸಿಕೊಳ್ಳುವ ಈ ರೀತಿಯ ರಕ್ತ ಕ್ಯಾನ್ಸರ್ ಮೂನ್ಸೂಚನೆ ಅರಿಯುವುದು ತುಂಬಾ ಕಷ್ಟ. ರಕ್ತಮಜ್ಜೆ ಸರಿಹೊಂದುವಂತಹ ದಾನಿಯೊಬ್ಬರು ಅಮೆರಿಕದಲ್ಲಿ ದೊರಕಿದ್ದು, ಅವರ ಮೂಲ ಜೀವಕೋಶವನ್ನು ಶಿಶುವಿಗೆ ನೀಡಲಾಯಿತು' ಎಂದರು.
`ಭಾರತಿಯರಲ್ಲಿ ಮೂಲ ಜೀವಕೋಶ ವರ್ಗಾವಣೆಯ ಬಗ್ಗೆ ಹೆಚ್ಚು ಅರಿವಿಲ್ಲ. ದೇಶದಲ್ಲಿ ಇದರ ಕುರಿತು ಜಾಗೃತಿ ಮೂಡಿಸುವ ಅಗತ್ಯವಿದೆ' ಎಂದರು.