ಹೊಸಕೋಟೆ: ಯುವಕನೊಬ್ಬ ತನ್ನ ಸಹೋದರಿಯನ್ನು ಪ್ರಿತಿಸುತ್ತಿದ್ದ ಯವಕನನ್ನು ಲಾಂಗ್ನಿಂದ ಹಲ್ಲೆ ಮಾಡಿ ಕೊಲೆ ಮಾಡಿದ ಘಟನೆ ಪಟ್ಟಣದಲ್ಲಿ ಗುರುವಾರ ರಾತ್ರಿ ನಡೆದಿದೆ.ಇಲ್ಲಿನ ರಜಪೂತರ ಪೇಟೆ ವಾಸಿ ಸುಲ್ತಾನ್ (24) ಕೊಲೆಯಾದ ಯುವಕ. ಪೊಲೀಸರು ಆರೋಪಿ ಆಸೀಫ್ನನ್ನು (22) ಬಂಧಿಸಿದ್ದಾರೆ.
‘ಆಟೋ ಚಾಲಕನಾಗಿದ್ದ ಸುಲ್ತಾನ್ ಪಟ್ಟಣದ ಸಂತೇಗೇಟ್ ಬಳಿ ವಾಸವಾಗಿದ್ದ ಸೈಯದ್ ಪಾಷ ಅವರ ಮಗಳನ್ನು ಪ್ರೀತಿಸುತ್ತಿದ್ದ. ಈ ವಿಷಯ ಅವರ ಮನೆಯವರಿಗೆ ಗೊತ್ತಿತ್ತು. ಗುರುವಾರ ಸಂಜೆ ಸುಲ್ತಾನ್ನ ತಂದೆ, ಭಾವ ಹಾಗೂ ಇತರ ಮೂವರು ಸ್ನೇಹಿತರು ಸಂಬಂಧ ಬೆಳೆಸಲು ಸೈಯದ್ ಪಾಷ ಅವರ ಮನೆಗೆ ಹೋಗಿದ್ದರು.
ಆದರೆ ತಮ್ಮ ಮಗಳನ್ನು ಬೇರೊಬ್ಬನಿಗೆ ಕೊಟ್ಟು ವಿವಾಹ ಮಾಡುವುದಾಗಿ ಅವರು ತಿಳಿಸಿದರು. ಮನೆಯಲ್ಲಿದ್ದ ಯುವತಿಯ ಅಣ್ಣ ಆಸೀಫ್ ಈ ಸಂಬಂಧವನ್ನು ವಿರೋಧಿಸಿ ಇನ್ನು ಮುಂದೆ ತನ್ನ ತಂಗಿಯನ್ನು ಪ್ರೀತಿಸದಂತೆ ಎಚ್ಚರಿಕೆ ಕೊಟ್ಟು ಕಳುಹಿಸಿದ.
ರಾತ್ರಿ ಬೈಕ್ನಲ್ಲಿ ಸುಲ್ತಾನ್ನ ಮನೆಗೆ ಬಂದ ಆಸೀಫ್ ಬುದ್ಧಿವಾದ ಹೇಳಲು ಆತನನ್ನು ಇಲ್ಲಿನ ಸರ್ಕಾರಿ ಪದವಿ ಕಾಲೇಜು ಮೈದಾನಕ್ಕೆ ಕರೆದೊಯ್ದ. ನಿನ್ನ ತಂಗಿಯನ್ನೇ ಮದುವೆ ಆಗುವುದಾಗಿ ಸುಲ್ತಾನ್ ಪಟ್ಟು ಹಿಡಿದಾಗ ಅವರಿಬ್ಬರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಆಗ ಆಸೀಫ್ ದೊಣ್ಣೆ, ಲಾಂಗ್ನಿಂದ ಹೊಡೆದು ಕೊಲೆ ಮಾಡಿ ಬೈಕ್ ಅನ್ನು ಅಲ್ಲೇ ಬಿಟ್ಟು ಪರಾರಿಯಾದ.
ಕೊಲೆಗೆ ಬಳಸಿದ ಲಾಂಗ್ ಮತ್ತು ದೊಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ’ ಎಂದು ಸಿಪಿಐ ಎಂ.ಮಲ್ಲೇಶ್ ತಿಳಿಸಿದ್ದಾರೆ. ಕೊಲೆ ಪ್ರಕರಣ ದಾಖಲಿಸಿದ ಪೊಲೀಸರು ಆರೋಪಿಯನ್ನು ಕೆಲವೇ ಗಂಟೆಗಳಲ್ಲಿ ಚಿಂತಾಮಣಿ ಬಳಿ ಬಂಧಿಸುವಲ್ಲಿ ಯಶಸ್ವಿಯಾದರು.
ನೇಮಕ: ತಾಲ್ಲೂಕು ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕಿಗೆ ನಿರ್ದೇಶಕರನ್ನಾಗಿ ಹೊಸಕೋಟೆ ಪಟ್ಟಣದ ಮೇಲಿನ ಪೇಟೆಯ ಎಲ್.ನಾಗರಾಜ್ ಅವರನ್ನು ನೇಮಕ ಮಾಡಲಾಗಿದೆ. ನಿರ್ದೇಶಕರಾಗಿದ್ದ ಸಿ.ಜಯರಾಜ್ ರಾಜೀನಾಮೆಯಿಂದ ಆ ಸ್ಥಾನ ತೆರವಾಗಿತ್ತು.