ಬೆಂಗಳೂರು: ‘ಯಶವಂತಪುರ ಎ.ಪಿ.ಎಂ.ಸಿ ಯಾರ್ಡ್ಗೆ ಹರಿಯುವ ಕೊಳಚೆ ನೀರನ್ನು ತಡೆಯಲು ೧೫ ದಿನಗಳ ಒಳಗಾಗಿ ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್ ಎನ್.ಶಾಂತಕುಮಾರಿ ಹೇಳಿದರು.
ಶಾಸಕ ಕೆ.ಗೊಪಾಲಯ್ಯ ಅವರೊಂದಿಗೆ ವೃಷಭಾವತಿನಗರ, ಶಕ್ತಿಗಣಪತಿನಗರ, ಮಾರಪ್ಪನಪಾಳ್ಯ ವಾರ್ಡ್ಗಳಲ್ಲಿ ಶನಿವಾರ ತಪಾಸಣೆ ನಡೆಸುವಾಗ ಅವರು ಯಶವಂತಪುರ ಎಪಿಎಂಸಿ ಯಾರ್ಡ್ಗೆ ಭೇಟಿ ನೀಡಿದರು. ಆಗ ವರ್ತಕರ ಅಹವಾಲು ಆಲಿಸಿದ ಅವರು ಈ ಭರವಸೆಯನ್ನು ನೀಡಿದರು.
‘ಎಪಿಎಂಸಿ ಯಾರ್ಡ್ಗೆ ಗೌತಮಪುರ ಕೊಳಚೆ ಪ್ರದೇಶದಿಂದ ನೀರು ಹರಿದು ಬರುವುದನ್ನು ತಡೆಗಟ್ಟಬೇಕು. ಅಲ್ಲದೆ ಎಪಿಎಂಸಿಗೆ ಸೇರಿದ ೮೮ ಎಕರೆ ೧೯ ಗುಂಟೆ ಪ್ರದೇಶಕ್ಕೆ ಖಾತೆ ಮಾಡಿಕೊಡಬೇಕು’ ಎಂದು ವರ್ತಕರ ಸಂಘದ ಪದಾಧಿಕಾರಿಗಳು ಮನವಿ ಸಲ್ಲಿಸಿದರು.
‘ಎಪಿಎಂಸಿ ಯಾರ್ಡ್ನಿಂದ ಪ್ರತಿ ವರ್ಷ ನಾವು ಪಾಲಿಕೆಗೆ ₨ ೨.೨೫ ಕೋಟಿ ತೆರಿಗೆ ಪಾವತಿಸುತ್ತೇವೆ. ಆದರೆ ಕನಿಷ್ಠ ಮೂಲ ಸೌಕರ್ಯ ದೊರೆಯುತ್ತಿಲ್ಲ’ ಎಂದು ಅಸಮಧಾನ ವ್ಯಕ್ತಪಡಿಸಿದರು.
‘ಕಸ ವಿಲೇವಾರಿ, ನೀರು ಸೋರುವಿಕೆ ಇನ್ನಿತರೆ ಸಮಸ್ಯೆಗಳನ್ನು 15 ದಿನಗಳಲ್ಲಿ ಬಗೆಹರಿಸಬೇಕು ಎಂದು ಜಲಮಂಡಳಿ ಹಾಗೂ ಪಾಲಿಕೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದೇನೆ’ ಎಂದು ಗೋಪಾಲಯ್ಯ ತಿಳಿಸಿದರು. ‘ಮಹಾಲಕ್ಷ್ಮೀಪುರ ಕ್ಷೇತ್ರದಲ್ಲಿ ಹಲವಾರು ಕಡೆ ಮಳೆ ನೀರಿನ ಮೋರಿಯ ತಡೆಗೋಡೆ ಮತ್ತು ಸೇತುವೆಗಳು ಹಾಳಾಗಿದ್ದು ಅವುಗಳ ಪುನರ್ ನಿರ್ಮಾಣಕ್ಕಾಗಿ ₨೧೦ ಕೋಟಿ ಅಂದಾಜು ವೆಚ್ಚದಲ್ಲಿ ಪ್ರಸ್ತಾವವನ್ನು ಪಾಲಿಕೆಗೆ ಸಲ್ಲಿಸಲಾಗಿದೆ. ಅದಕ್ಕೆ ಅನುಮೋದನೆ ನೀಡಲು ಆಯುಕ್ತರಿಗೆ ಸೂಚನೆ ನೀಡಬೇಕು’ ಎಂದು ಅವರು ಮೇಯರ್ ಅವರಲ್ಲಿ ಮನವಿ ಮಾಡಿದರು.
‘ಸಣ್ಣಕ್ಕಿ ಬಯಲು, ಕಾಮಾಕ್ಷಿಪಾಳ್ಯ ಮುಂತಾದ ಕಡೆ ಮಳೆ ನೀರಿನ ಮೋರಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆಗಳು ಹಾಳಾಗಿದ್ದು ಯಾವುದೇ ಸಂದರ್ಭದಲ್ಲಿ ಅಪಾಯ ಉಂಟಾಗುವ ಸಂಭವ ಇದೆ. ಅವುಗಳ ದುರಸ್ತಿಗೆ ಕೂಡಲೇ ಕ್ರಮ ಕೈಗೊಳ್ಳಬೇಕು’ ಎಂದು ಮೇಯರ್, ಮುಖ್ಯ ಎಂಜಿನಿಯರ್ (ಬೃಹತ್ ನೀರುಗಾಲುವೆ) ಅವರಿಗೆ ಸೂಚನೆ ನೀಡಿದರು.
ಕಮಲಾನಗರದ ಮೂರನೇ ರಸ್ತೆಯಲ್ಲಿ ಮಳೆನೀರಿನ ಮೋರಿಗೆ ಅಡ್ಡಲಾಗಿ ಕಟ್ಟಿದ್ದ ಸೇತುವೆ ಬಿದ್ದಿರುವ ಸ್ಥಳಕ್ಕೆ ಮೇಯರ್ ಭೇಟಿ ನೀಡಿ ಪರಿಶೀಲನೆ ಮಾಡಿದರು. ‘೧೫ ಅಡಿ ಆಳದ ಮೋರಿಯಿಂದ ಸಾರ್ವಜನಿಕರಿಗೆ ಅಪಾಯ ಉಂಟಾಗುವ ಸಂಭವ ಇದ್ದು, ಕೂಡಲೇ ದುರಸ್ತಿ ಕಾರ್ಯವನ್ನು ಪ್ರಾರಂಭಿಸಬೇಕು’ ಎಂದು ಎಂಜಿನಿಯರ್ಗೆ ಸೂಚನೆ ನೀಡಿದರು. ಉಪ ಮೇಯರ್ ಕೆ.ರಂಗಣ್ಣ ಹಾಗೂ ಪಾಲಿಕೆ ಸದಸ್ಯರಾದ ಪದ್ಮಾವತಿ ಶ್ರೀನಿವಾಸ್, ಲಕ್ಷ್ಮೀ ಚಿಕ್ಕೇಗೌಡ, ನಾಗರತ್ನ ಲೊಕೇಶ್, ಮೋಹನ್ಕುಮಾರ್ ಉಪಸ್ಥಿತರಿದ್ದರು.
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.