ಹೊಸಕೋಟೆ: ‘ರಂಗಕಲಾವಿದರಿಗೆ ಪ್ರೋತ್ಸಾಹ ನೀಡುವುದರ ಮೂಲಕ ಸಂದಿಗ್ಥತೆಯಲ್ಲಿರುವ ರಂಗಭೂಮಿಯನ್ನು ಉಳಿಸಿ ಬೆಳೆಸುವುದು ಸಾರ್ವಜನಿಕರ ಜವಾಬ್ದಾರಿ’ ಎಂದು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದರು.
ಬೆಂಗಳೂರಿನ ಅರವಿಂದ ಕಲಾವೃಂದದವರು ಹೊಸಕೋಟೆಯಲ್ಲಿ ಹಮ್ಮಿಕೊಂಡಿದ್ದ ವಿಶ್ವ ರಂಗಭೂಮಿ ದಿನಾಚರಣೆ ಹಾಗೂ ಕಲಾವೃಂದದ 30 ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಮಾತನಾಡಿದರು. ಜನರಿಗೆ ಮನರಂಜನೆಯನ್ನು ಕೊಡುವುದರ ಜತೆಗೆ ಇಂದಿಗೂ ನಮ್ಮ ಕಲೆ, ಸಂಸ್ಕೃತಿಯನ್ನು ರಂಗಭೂಮಿ ಉಳಿಸಿಕೊಂಡು ಬಂದಿದೆ. ಆದರೆ ಇಂದಿನ ಆಧುನಿಕ ದೃಶ್ಯ ಮಾಧ್ಯಮಗಳ ಭರಾಟೆಯಲ್ಲಿ ರಂಗಭೂಮಿಗೆ ಅಪಾಯ ತಟ್ಟಿದ್ದು ಕಲಾವಿದರ ಆತಂಕಕ್ಕೆ ಕಾರಣವಾಗಿದೆ ಎಂದು ಹೇಳಿದರು.
ಅರವಿಂದ ಕಲಾವೃಂದದ ಮುಖ್ಯಸ್ಥ ಅರವಿಂದ್ ಮಾತನಾಡಿ ಬಹಳಷ್ಟು ರಂಗಭೂಮಿ ಕಲಾವಿದರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದು ಜೀವನ ನಡೆಸುವುದೇ ದುಸ್ತರವಾಗಿದೆ. ಅಲ್ಲದೆ ಹಲವು ಪ್ರತಿಭಾವಂತ ಕಲಾವಿದರನ್ನು ಸರ್ಕಾರ ಗುರುತಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಹಿರಿಯ ಕಲಾವಿದರಾದ ಸದಾಶಿವ ಬ್ರಹ್ಮಾವರ್, ಬಿರಾದಾರ್, ಅನ್ನಪೂರ್ಣಸಾಗರ್ ಅವರನ್ನು ಸನ್ಮಾನಿಸಲಾಯಿತು.