ಬೆಂಗಳೂರು: ‘ಬೆಳಗಾವಿಯಲ್ಲಿ ಮಿಲಿಟರಿ ಆಡಳಿತ ನಡೆಯುತ್ತಿದೆ. ಅಲ್ಲಿನ ಜಿಲ್ಲಾಡಳಿತ ಕನ್ನಡಿಗರನ್ನು ತುಳಿಯುತ್ತಿದ್ದರೆ, ಪೊಲೀಸರು ದಬ್ಬಾಳಿಕೆ ನಡೆಸುತ್ತಿದ್ದಾರೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಆರೋಪಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳು ಕನ್ನಡಿಗರ ಪರವಾಗಿಲ್ಲ. ಕನ್ನಡ ಪರ ಸಂಘಟನೆಗಳ ಮೇಲೆ ನಾನಾ ಪ್ರಕರಣಗಳನ್ನು ದಾಖಲಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಎಂಇಎಸ್ ಶಾಸಕರು ರಾಜ್ಯ ಮತ್ತು ಕನ್ನಡಿಗರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದನ್ನು ವಿರೋಧಿಸಿ ಬೆಳಗಾವಿಯಲ್ಲಿ ಪ್ರತಿಭಟಿಸಲು ಕನ್ನಡಪರ ಸಂಘಟನೆಗಳು ನಿರ್ಧರಿಸಿದ್ದವು. ಅದರಂತೆ ಬುಧವಾರ ಬೆಳಗಾವಿಗೆ ಹೊರಟಿದ್ದ ಸಂಘಟನೆಗಳನ್ನು ಪೊಲೀಸರು ಶಿಗ್ಗಾವಿಯ ಬಳಿಯೇ ತಡೆದು ನಿಲ್ಲಿಸಿದರು ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ಶಿಗ್ಗಾವಿಯಿಂದ ಮುಂದೆ ಹೋಗಲು ಬಿಡದ ಪೊಲೀಸರು ಬೆಂಗಳೂರಿಗೆ ಹಿಂತಿರುಗುವಂತೆ ಸೂಚಿಸಿದರು. ಹೀಗೆ ನಮ್ಮ ರಾಜ್ಯದಲ್ಲೇ ನಮಗೆ ಸಂಚರಿಸದಂತೆ ತಡೆದ ಈ ಪೊಲೀಸರು ಯಾರು’ ಎಂದು ಪ್ರಶ್ನಿಸಿದರು.
ಎಸ್ಮಾಗೆ ವಿರೋಧ: ಎಸ್ಮಾ ಕಾಯ್ದೆಗೆ ಅಧಿವೇಶನದಲ್ಲಿ ಅನುಮೋದನೆ ನೀಡಿರುವುದು ದುರಂತದ ಸಂಗತಿ. ಇದು ಕಾರ್ಮಿಕ ವಿರೋಧಿ ಮತ್ತು ಅಪಾಯಕಾರಿ ಕಾಯ್ದೆ. ಕಾರ್ಮಿಕರ ಹೋರಾಟಗಳನ್ನು ಹತ್ತಿಕ್ಕಲು ಇದನ್ನು ಜಾರಿಗೆ ತರಲಾಗಿದೆ. ಈ ಸಂಬಂಧ ಸದ್ಯದಲ್ಲೇ ಕಾರ್ಮಿಕರ ಸಂಘಟನೆಗಳೊಂದಿಗೆ ಚರ್ಚಿಸಿ, ಪ್ರತಿಭಟನೆ ನಡೆಸಲು ನಿರ್ಧರಿಸಲಾಗುವುದು ಎಂದು ತಿಳಿಸಿದರು.
ನಿರ್ಮಾಪಕ ಸಾ.ರಾ.ಗೋವಿಂದು ಮಾತನಾಡಿ, ‘ಕನ್ನಡಪರ ಸಂಘಟನೆಗಳ ಹೋರಾಟದ ಫಲವಾಗಿ ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣವಾಗಿದೆ. ಆದರೆ ಅಂತಹ ಸಂಘಟನೆಗಳನ್ನೇ ಬೆಳಗಾವಿಗೆ ಬರಬೇಡಿ ಎಂದು ಪೊಲೀಸರು ತಡೆಯುತ್ತಿದ್ದಾರೆ. ಇದು ಸರಿಯಲ್ಲ’ ಎಂದರು.