ಬೆಂಗಳೂರು: ‘ದೇಶದ ಇತಿಹಾಸ, ಪರಂಪರೆ ಪ್ರತಿಬಿಂಬಿಸುವ ಪಳೆಯುಳಿಕೆಗಳಾಗಿರುವ ಶಿಲಾಶಾಸನಗಳನ್ನು ಜತನದಿಂದ ಸಂರಕ್ಷಿಸುವ ಕಾರ್ಯ ಆಗಬೇಕಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಹೇಳಿದರು.
ಪುರಾತತ್ವ ಇಲಾಖೆ ಕಸ್ತೂರಿ ಬಾ ರಸ್ತೆಯಲ್ಲಿರುವ ಸರ್ಕಾರಿ ವಸ್ತುಸಂಗ್ರಹಾಲಯದಲ್ಲಿ ಬುಧವಾರ ಆಯೋಜಿಸಿದ್ದ ಬೆಂಗಳೂರು ವಸ್ತುಸಂಗ್ರಹಾಲಯದ 150ನೇ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ವೈಜ್ಞಾನಿಕ ಬೆಳವಣಿಗೆಗಳು ನಮ್ಮ ಪರಂಪರೆ, ಸಂಸ್ಕೃತಿಯನ್ನು ಎಲ್ಲೋ ಒಂದು ಕಡೆ ಆಕ್ರಮಿಸಿಕೊಳ್ಳುತ್ತಿರುವಂತೆ ಭಾಸವಾಗುತಿದೆ. ಈ ಹೊತ್ತಿನಲ್ಲಿ ವೈಜ್ಞಾನಿಕ ಪ್ರಗತಿಯ ಜತೆಗೆ ನಮ್ಮ ಸಂಸ್ಕೃತಿ ಪರಂಪರೆಯನ್ನು ಉಳಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.
‘ಶಾಲಾ ಮಕ್ಕಳ ಶೈಕ್ಷಣಿಕ ಪ್ರವಾಸ ಸಂದರ್ಭಗಳಲ್ಲಿ ಇತಿಹಾಸ ಪ್ರಜ್ಞೆ ಮೂಡಿಸುವ ಸಲುವಾಗಿ ‘ಪ್ರಾಚ್ಯ-ಪ್ರಜ್ಞೆ’ ಎಂಬ ಯೋಜನೆ ಜಾರಿಗೆ ತರಲಾಯಿತು. ಮಕ್ಕಳಿಗೆ ತಾವು ನೋಡಿದಂತಹ ಐತಿಹಾಸಿಕ ಸ್ಥಳಗಳ ಬಗ್ಗೆ ರಸಪ್ರಶ್ನೆ, ಪ್ರಶ್ನಾವಳಿ ಮುಂತಾದ ಕಾರ್ಯಕ್ರಮ ಏರ್ಪಡಿಸುವ ಮೂಲಕ ಅವರಿಗೆ ಇತಿಹಾಸದ ಬಗ್ಗೆ ಸ್ಪಷ್ಟ ಆಳವಾದ ಜ್ಞಾನ ಮೂಡಿಸುವುದು ಯೋಜನೆ ಉದ್ದೇಶವಾಗಿದೆ’ ಎಂದರು.
‘ಪತ್ರಗಾರ, ಪ್ರಾಚ್ಯವಸ್ತು, ಮತ್ತು ಪರಂಪರೆ ಇಲಾಖೆಗೆ ಕಾಯಕಲ್ಪ ನೀಡುವ ಸಂಬಂಧ ಇತಿಹಾಸ ತಜ್ಞರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವರೊಂದಿಗೆ ಚರ್ಚಿಸಿ ರೂಪುರೇಷೆ ಸಿದ್ಧಪಡಿ ಸಲಾಗುವುದು’ ಎಂದು ತಿಳಿಸಿದರು.
*