ಚಿಟಗುಪ್ಪ: ತಾಲ್ಲೂಕಿನ ಬೆಳಕೇರಾ ಗ್ರಾಮದಲ್ಲಿ ಎತ್ತುಗಳಿಗೆ ಪೂಜೆ ಸಲ್ಲಿಸುವ ಮೂಲಕ ಬಸವ ಜಯಂತಿ ಆಚರಿಸಲಾ ಯಿತು.
ಮಹಿಳೆಯರು ಮುಂಜಾನೆ ಮನೆಯ ಅಂಗಳದಲ್ಲಿ ಸಾರಣೆ ಮಾಡಿ ರಂಗೋಲಿಯ ಚಿತ್ತಾರ ಬಿಡಿಸಿ ವಿಶೇಷ ಸಿಹಿ ಅಡುಗೆ ಸಿದ್ಧಪಡಿಸಲು ಆರಂಭಿಸಿದರು.
ಪುರುಷರು ಎತ್ತುಗಳಿಗೆ ತೋಟದ ಬಾವಿಯ ನೀರಿನಿಂದ ಸ್ನಾನ ಮಾಡಿಸಿ ಮೈ ತಿಕ್ಕಿ ಸಿಂಗಾರಗೊಳಿಸಿಕೊಂಡು ಮನೆಗೆ ಹೊಡೆದುಕೊಂಡು ಬಂದು ಅಂಗಳದಲ್ಲಿ ಮೇವು ಹಾಕಿ ಮೈ ಮೇಲೆ ಹೊಸ ಬಟ್ಟೆ ಹೊದಿಸಿದರು.
ಮಹಿಳೆಯರು ಎತ್ತುಗಳಿಗೆ ಪೂಜೆ ಸಲ್ಲಿಸಿ ನೈವೇದ್ಯ ಅರ್ಪಿಸಿ ಕುಟುಂಬ ಸದಸ್ಯರೆಲ್ಲರೂ ನಮಸ್ಕರಿಸಿ ಆರತಿ ಬೆಳಗಿ ತೆಂಗು ಒಡೆದರು.
ಚಂದ್ರಶೇಖರ ನಾರಾಯಣಪೇಟಕರ್, ಶರಣಪ್ಪ ಕೊರಿ, ರಾಚಯ್ಯ ಸ್ವಾಮಿ, ಬೀರಪ್ಪ ಕೊಟ್ಟರಗಿ, ಸಾಗರ ಬುಡ್ಡಿ, ಸಿದ್ದು ಕಬಾಡಿ, ಪಾರ್ವತಿ ಶಿವಯ್ಯ, ರಾಜು ಹುಡಗಿ, ಮಾರುತಿ ಈರಬಾಯಿ, ಸಂಜಯ್ಯ ಸ್ವಾಮಿ ಹಾಗೂ ಕಾಸಯ್ಯ ಮಠ ಇದ್ದರು.
ಕರಕನಳ್ಳಿ: ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕ ವಿಠ್ಠಲರೆಡ್ಡಿ ಬಸವೇಶ್ವರರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಪೂಜೆ ಸಲ್ಲಿಸಿದರು.
ಬಳಿಕ ಮಾತನಾಡಿದ ಅವರು,‘ಜಯಂತಿ ಆಚರಣೆಗೆ ಸೀಮಿತವಾಗಬಾರದು. ಎಲ್ಲರೂ ಜೀವನದಲ್ಲಿ ಮಹಾತ್ಮರ ಬದುಕಿನ ಸಂದೇಶ ಅಳವಡಿಸಿಕೊಳ್ಳಬೇಕು. ಅಂದಾಗ ಮಾತ್ರ ಜಯಂತಿಗಳ ಆಚರಣೆಗೆ ಸಾರ್ಥಕತೆ ಬರುತ್ತದೆ’ ಎಂದರು.
ಶಾಲೆಯ ಶಿಕ್ಷಕಿಯರು, ವಿದ್ಯಾರ್ಥಿಗಳು, ಶಾಲಾ ಮೇಲುಸ್ತುವಾರಿ ಸಮಿತಿ ಪದಾಧಿಕಾರಿಗಳು ಇದ್ದರು.