ಬೀದರ್: ಇಲ್ಲಿಯ ಮುಖಂಡ ಬಸವರಾಜ ನಿಟ್ಟೂರೆ ಅವರು ಮೂರನೇ ಬಾರಿಗೆ ಕರ್ನಾಟಕ ರಾಜ್ಯ ಕೈಗಾರಿಕಾ ಸರಬರಾಜು ಮತ್ತು ಮಾರಾಟ ಸಹಕಾರ ಮಹಾ ಮಂಡಳದ ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ.
ಐದು ವರ್ಷಗಳ ಅವಧಿಗೆ ನಡೆದ ಚುನಾವಣೆಯಲ್ಲಿ ನಿಟ್ಟೂರೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಲಿಂಗಮೂರ್ತಿ ತಿಳಿಸಿದ್ದಾರೆ.
ಸದ್ಯ ಬೀದರ್ನ ರಾಂಪುರೆ ಕಾಲೊನಿಯಲ್ಲಿ ವಾಸವಾಗಿರುವ ಮೂಲತಃ ಔರಾದ್ ತಾಲ್ಲೂಕಿನ ಯನಗುಂದಾ ಗ್ರಾಮದವರಾದ ನಿಟ್ಟೂರೆ ಅವರು ಈ ಹಿಂದೆ ಎರಡು ಬಾರಿ ಮಹಾ ಮಂಡಳದ ನಿರ್ದೇಶಕರಾಗಿ ಉತ್ತಮ ಕೆಲಸ ಮಾಡಿದ್ದಾರೆ. ಹೀಗಾಗಿ ಅವರಿಗೆ ಮೂರನೇ ಅವಧಿಗೆ ಅವಕಾಶ ದೊರಕಿದೆ.
ಸನ್ಮಾನ: ಮಹಾಮಂಡಳಕ್ಕೆ ಆಯ್ಕೆಯಾದ ಬಸವರಾಜ ನಿಟ್ಟೂರೆ ಅವರನ್ನು ನಗರದ ರಾಂಪುರೆ ಕಾಲೊನಿಯಲ್ಲಿ ಗುರುದತ್ತ ನಗರ ಅಭಿವೃದ್ಧಿ ಸಂಘ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಶಾಲು ಹೊದಿಸಿ ಸನ್ಮಾನಿಸಿದರು.
ಗುರುದತ್ತ ನಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಶಾಂತವೀರ ಚಪಾತಿ, ಕಂಟೆಪ್ಪ ಎನಕೆಮೊರೆ, ಎಚ್. ಚಂದ್ರಕಾಂತ, ಮಲ್ಲಿಕಾರ್ಜುನ ಪಾಟೀಲ, ಬಳಿರಾಮ ಕುರನಾಳೆ, ಮಲ್ಲಿಕಾರ್ಜುನ ನೀಲಾ, ಗಂಗಾಧರ ಪಂಚಾಳ, ಉಮಾಕಾಂತ ಬಲಜೀತ್, ಗುಂಡಪ್ಪ ಪಾಟೀಲ, ಸಂಗ್ರಾಮ ರೆಡ್ಡಿ ಇದ್ದರು.