ಬಸವಕಲ್ಯಾಣ (ಬೀದರ್ ಜಿಲ್ಲೆ): ಕಲಬುರಗಿ ಗ್ರಾಮೀಣ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಶ್ರೀಮಂತ ಇಲ್ಲಾಳ ಅವರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ತಾಲ್ಲೂಕಿನ ಹೊನ್ನಳ್ಳಿಗೆ ಹೊಂದಿ ಕೊಂಡಿರುವ ಮಹಾರಾಷ್ಟ್ರದ ಥೋರಲೆವಾಡಿಯಲ್ಲಿ ಕಾರ್ಯಾಚರಣೆ ನಡೆಸಿದ ಮಂಠಾಳ ಠಾಣೆ ಪೊಲೀಸರು 10 ಆರೋಪಿಗಳನ್ನು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
‘ಸಾಯಬಣ್ಣ ಚಿಂಚೋಳೆ, ಚಂದ್ರ ಕಾಂತ ಚಿಂಚೋಳೆ, ಸಚಿನ್, ಅವಿನಾಶ, ಬಜರಂಗ, ಧನರಾಜ ಹೊನ್ನಳ್ಳೆ, ಮಹೇಶ, ಬಾಳು ಭೋಸ್ಲೆ, ರಾಯಪ್ಪ ಗುತ್ತೇವಾಲೆ ಮತ್ತು ಆನಂದ ಹಿಪ್ಪರ್ಗಾ ಬಂಧಿತರು.
ಗಾಂಜಾ ನಾಶ: ‘ಕಲಬುರಗಿ ಜಿಲ್ಲೆಯಲ್ಲಿ ಬಂಧಿಸಿದ್ದ ಗಾಂಜಾ ಮಾರಾಟ ಪ್ರಕರಣದ ಆರೋಪಿ ಭೋಸಗಾದ ಸಂತೋಷ, ಥೋರಲೆವಾಡಿಯಲ್ಲಿ ಗಾಂಜಾ ಬೆಳೆಯುತ್ತಿರುವ ಕುರಿತು ಮಾಹಿತಿ ನೀಡಿದ ಆಧಾರದ ಮೇಲೆ ಅಲ್ಲಿ ಕಾರ್ಯಾಚರಣೆ ನಡೆಸಲಾಗಿತ್ತು. ಇಲ್ಲಾಳ ಮೇಲೆ ಹಲ್ಲೆ ನಡೆದಾಗ ಅಲ್ಲಿ ಗಾಂಜಾದ 30 ದೊಡ್ಡ ಗಿಡಗಳಿದ್ದವು. ಆದರೆ, ನಂತರ ಅವನ್ನು ಕಿತ್ತು ಹಾಕಲಾಗಿದ್ದು, 850 ಗ್ರಾಂ ಗಾಂಜಾ ದೊರೆತಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.