ಬೀದರ್: ‘ಆಯುರ್ವೇದ ಚಿಕಿತ್ಸಾ ಪದ್ಧತಿಯಿಂದ ರೋಗವೂ ನಿಧಾನ ಗತಿಯಲ್ಲಿ ನಿವಾರಣೆಯಾಗುವುದುದರ ಜತೆಗೆ ಶಾಶ್ವತ ಪರಿಹಾರ ದೊರಕುವುದು. ಆಯುಷ್ಯವೂ ವೃದ್ಧಿಸುತ್ತದೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ ಚಿದ್ರಿ ಹೇಳಿದರು.
ಇಲ್ಲಿಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಶನಿವಾರ ಪರಿಶಿಷ್ಟ ಜಾತಿಯ ಐಟಿಐ ತರಬೇತಿದಾರರಿಗೆ ಆಯೋಜಿಸಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಅಲೋಪಥಿಕ್ ಔಷಧಿ ಸೇವನೆಯಿಂದ ರೋಗ ನಿರೋಧಕ ಶಕ್ತಿ ಕಡಿಮೆಯಾಗುತ್ತದೆ’ ಎಂದರು.
‘ಅರಿಶಿಣ, ಬೆಳ್ಳುಳ್ಳಿ, ಶುಂಠಿ, ಮೆಣಸು, ಮೆಂತೆ ಮೊದಲಾದವು ಆರೋಗ್ಯಕ್ಕೆ ಪೂರಕವಾಗಿವೆ’ ಎಂದರು.
ಸಂಸ್ಥೆಯ ಪ್ರಭಾರ ಪ್ರಾಚಾರ್ಯ ಶಿವಶಂಕರ ಟೋಕರೆ ಮಾತನಾಡಿ,‘ದಿನಕ್ಕೆ ಕನಿಷ್ಠ ನಾಲ್ಕು ಲೀಟರ್ ನೀರು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಅನೇಕ ಕಾಯಿಲೆಗಳು ದೂರವಾಗುತ್ತವೆ’ ಎಂದು ಹೇಳಿದರು.
ಆಯುಷ್ ಇಲಾಖೆಯ ಜಿಲ್ಲಾ ಅಧಿಕಾರಿ ಡಾ.ಶಾರದಾ ಸಾಂಬ್ರೇಕರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಎನ್.ಕೆ.ಜಿ.ಆಯುರ್ವೇದ ವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕಿ ಡಾ.ಅಶ್ವಿನ ಕುಮಾರ ವಾಘಮಾರೆ, ಸಿದ್ಧರಾಮೇಶ್ವರ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ಪುರುಷೋತ್ತಮ ಪಾಟೀಲ ಇದ್ದರು. ಡಾ.ಶಿವಕುಮಾರ ನೇಳಗೆ ಸ್ವಾಗತಿಸಿದರು. ಡಾ.ರುದ್ರಯ್ಯ ಲೋಣಿಮಠ ನಿರೂಪಿಸಿದರು. ಡಾ.ಶಿವಕುಮಾರ ಸಂಗನ್ ವಂದಿಸಿದರು.