ಬೀದರ್: ಇಲ್ಲಿನ ಶಿವನಗರದಲ್ಲಿರುವ ರಾಮಕೃಷ್ಣ ವಿವೇಕಾನಂದ ಆಶ್ರಮದ ವಿವೇಕ ಭವನದಲ್ಲಿ ಫೆ. 27 ಹಾಗೂ 28ರಂದು ರಾಮಕೃಷ್ಣ ಪರಮಹಂಸರ ಜಯಂತ್ಯುತ್ಸವ ಹಾಗೂ ಎಸ್ಸೆಸ್ಸೆಲ್ಸಿ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ) ವಿದ್ಯಾರ್ಥಿಗಳಿಗೆ ಉಚಿತ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ.
ಆಶ್ರಮದ ವಿವೇಕಾನಂದ ಅಕಾಡೆಮಿ ಫಾರ್ ಎಜುಕೇಷನಲ್ ಎಕ್ಸ್ಲೆನ್ಸ್ ಕೇಂದ್ರದ ಸಹಯೋಗದಲ್ಲಿ ಕಾರ್ಯಾಗಾರ ಸಂಘಟಿಸಲಾಗಿದೆ. ಫೆ. 27ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 1ರ ವರೆಗೆ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ)ಗೆ ಹಾಜರಾಗಲಿರುವ ಅಭ್ಯರ್ಥಿಗಳಿಗೆ ಕಾರ್ಯಾಗಾರ ನಡೆಯಲಿದೆ.
ಬೆಂಗಳೂರಿನ ರಾಮಕೃಷ್ಣ ಯೋಗಾಶ್ರಮದ ಅಧ್ಯಕ್ಷ ಸ್ವಾಮಿ ಯೋಗೇಶ್ವರಾನಂದ ಮಹಾರಾಜ್ ಸಾನಿಧ್ಯ ವಹಿಸುವರು. ಕಾರ್ಪೋರೇಟ್ ಟ್ರೇನರ್ ರಮೇಶ ಉಮರಾಣಿ ಉಪನ್ಯಾಸ ನೀಡುವರು ಎಂದು ಆಶ್ರಮದ ಅಧ್ಯಕ್ಷ ಸ್ವಾಮಿ ಜ್ಯೋತಿರ್ಮಯಾನಂದ ಮಹಾರಾಜ್ ತಿಳಿಸಿದ್ದಾರೆ.
ಬರುವ ತಿಂಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯಲಿವೆ. ಇದರ ಸಿದ್ಧತೆಯ ಜತೆಗೆ ಪರೀಕ್ಷೆ ನಿರ್ಭಯವಾಗಿ, ಆತ್ಮವಿಶ್ವಾಸದಿಂದ ಹೇಗೆ ಬರೆಯಬೇಕು ಎನ್ನುವ ಕುರಿತು 28 ರಂದು ಬೆಳಿಗ್ಗೆ 10ರಿಂದ ಮಧ್ಯಾಹ್ನ 12 ರವರೆಗೆ ವಿಶೇಷ ಕಾರ್ಯಾಗಾರ ನಡೆಯಲಿದೆ. ರಮೇಶ ಉಮರಾಣಿ ಅವರ ಜತೆ ಪರಿಣಿತ ಸಂಪನ್ಮೂಲ ವ್ಯಕ್ತಿಗಳು ಸೂಕ್ತ ಮಾರ್ಗದರ್ಶನ ಮಾಡಲಿದ್ದಾರೆ.
ಸಂಜೆ 6ಕ್ಕೆ ರಾಮಕೃಷ್ಣರ ಜಯಂತ್ಯುತ್ಸವ, ಆಧ್ಯಾತ್ಮಿಕ ಚಿಂತನೆ ನಡೆಯಲಿದೆ. ಧ್ಯಾನ, ಭಜನೆ, ಉಪನ್ಯಾಸ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಯಲಿರುವುದು ಕಾರ್ಯಾಗಾರದ ವಿಶೇಷವಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದಿಂದ ಶಿಕ್ಷಕರ ನೇಮಕ ಸಂಬಂಧ ಟಿಇಟಿ ಪರೀಕ್ಷೆ ಒಂದು ತಿಂಗಳ ನಂತರ ನಡೆಯಲಿವೆ. ಆಶ್ರಮದ ಅಕಾಡೆಮಿಯಲ್ಲಿ ತರಬೇತಿ ಪಡೆದ ಮೊದಲ ಬ್ಯಾಚ್ನ ಟಿಇಟಿ ಶಿಬಿರಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. 11 ಅಭ್ಯರ್ಥಿಗಳು ಶಿಕ್ಷಕರಾಗಿ ಆಯ್ಕೆಯಾಗಿದ್ದಾರೆ. ಬರುವ ಟಿಇಟಿ ಪರೀಕ್ಷೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಪಾಸಾಗಬೇಕೆಂಬುದೇ ನಮ್ಮ ಧ್ಯೇಯವಾಗಿದೆ. ವಿದ್ಯಾರ್ಥಿಗಳು ಈ ಕಾರ್ಯಾಗಾರದ ಲಾಭ ಪಡೆಯಬೇಕು. ಮಾಹಿತಿಗಾಗಿ 9448036608, 9448036609, 9449274245 ಗೆ ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.