ಬೀದರ್: ಗ್ರೇಟರ್ ಹೈದರಾಬಾದ್ ಮುನ್ಸಿಪಲ್ ಕಾರ್ಪೊರೇಷನ್ನಲ್ಲಿ ಬಿಜೆಪಿ ಭಾರಿ ಗೆಲುವಿಗೆ ಕಾರಣರಾಗಿರುವ ಮತದಾರರು ಮೋದಿ ನಾಯಕತ್ವ ಹಾಗೂ ಪಕ್ಷದ ಅಭಿವೃದ್ಧಿ ರಾಜಕಾರಣಕ್ಕೆ ಮನ್ನಣೆ ನೀಡಿದ್ದಾರೆ ಎಂದು ಸಂಸದ ಭಗವಂತ ಖೂಬಾ ಪ್ರತಿಕ್ರಿಯಿಸಿದ್ದಾರೆ.
2016 ರ ಕಾರ್ಪೊರೇಷನ್ ಚುನಾವಣೆಯಲ್ಲಿ ನಾಲ್ಕು ಸ್ಥಾನ ಗಳಿಸಿದ್ದ ಪಕ್ಷ ಈ ಬಾರಿ ಅತಿ ಹೆಚ್ಚು ಅಂದರೆ 49 ಸ್ಥಾನಗಳಲ್ಲಿ ಜಯಭೇರಿ ಬಾರಿಸಿದೆ ಎಂದು ತಿಳಿಸಿದ್ದಾರೆ.
ಚುನಾವಣೆಯಲ್ಲಿ ಈವರೆಗೆ ಜಾತಿ ಆಧಾರಿತ ರಾಜಕಾರಣ ಮಾಡುತ್ತಿದ್ದ ಕಾಂಗ್ರೆಸ್, ಎಐಎಂಐಎಂ ಮುಖಭಂಗ ಅನುಭವಿಸಿವೆ. ತೆಲಂಗಾಣ ಜನರು ಬಿಜೆಪಿಗೆ ನೀಡಿರುವ ಬೆಂಬಲಕ್ಕೆ ಪ್ರತಿಯಾಗಿ ಪಕ್ಷ ಬರುವ ದಿನಗಳಲ್ಲಿ ಭಾಗ್ಯನಗರದ ಭಾಗ್ಯದ ಬಾಗಿಲು ತೆರೆಯಲು ಪ್ರಯತ್ನಿಸಲಿದೆ ಎಂದು ಹೇಳಿದ್ದಾರೆ.
ದಕ್ಷಿಣ ಭಾರತದಲ್ಲಿ ಕರ್ನಾಟಕದ ಜತೆಗೆ ಇದೀಗ ತೆಲಂಗಾಣದಲ್ಲೂ ಬಿಜೆಪಿ ಭದ್ರವಾಗಿ ನೆಲೆಯೂರಿದೆ. ಕೇಂದ್ರ ಸರ್ಕಾರದ ದೇಶದ ಹಿತದ ನಿರ್ಧಾರಗಳು, ಭ್ರಷ್ಟಾಚಾರ ರಹಿತ ಆಡಳಿತ, ಪಕ್ಷದ ಸಂಘಟನೆ ಹಾಗೂ ಕಾರ್ಯಕರ್ತರ ಶ್ರಮದ ಫಲವಾಗಿ ಇದು ಸಾಧ್ಯವಾಗಿದೆ ಎಂದು ತಿಳಿಸಿದ್ದಾರೆ.