ಹುಮನಾಬಾದ್: ತಾಲ್ಲೂಕಿನ ಸೆಡೋಳ ಗ್ರಾಮದಲ್ಲಿ ಕಳೆದ ಸೆಪ್ಟೆಂಬರ್ 1ರಂದು ಅನುಮಾನಸ್ಪಾದವಾಗಿ ಸಾವಿಗೀಡಾಗಿದ್ದ ಮೂರು ವರ್ಷದ ಗಂಡು ಮಗುವಿನ ಶವವನ್ನು ಮಂಗಳವಾರ ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಯಿತು.
ಸೆಡೋಳ ಗ್ರಾಮದ ಅನಿತಾ– ಅಂಬಾದಾಸ್ ಮೇತ್ರೆ ಅವರ ಪುತ್ರ ಅಶ್ವಿತ ಮೇತ್ರೆ (3) ಅದೇ ಗ್ರಾಮದ ತಮ್ಮ ಮನೆಯ ಪಕ್ಕದಲ್ಲಿ ಟಿ.ವಿ ನೋಡಲು ಹೋಗಿ ಆಕಸ್ಮಿಕವಾಗಿ ಮೃತಪಟ್ಟಿತ್ತು. ಕುಟುಂಬ ಸದಸ್ಯರು ಅಂದೇ ಮಗುವಿನ ಶವಸಂಸ್ಕಾರ ನಡೆಸಿದ್ದರು.
ಒಂದು ತಿಂಗಳ ಕಳೆದ ನಂತರ ಮಗುವಿನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ ಮಗುವಿನ ಪೋಷಕರು ಸೆಪ್ಟೆಂಬರ್ 28ರಂದು ಬಸವಕಲ್ಯಾಣದ ಉಪವಿಭಾಗಾಧಿಕಾರಿ ಹಾಗೂ ಹುಮನಾಬಾದ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಮಂಗಳವಾರ ಮುಂಜಾನೆ 11ಗಂಟೆ ಸುಮಾರಿಗೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಮತ್ತು ಪಿಎಸ್ಐ ಸಂತೋಷ ಅವರ ನೇತೃತ್ವದಲ್ಲಿ ಬೀದರ್ನ ವಿಧಿವಿಜ್ಞಾನ ಪ್ರಯೋಗಾಲಯದ ವೈದ್ಯರು ಮಗುವಿನ ಮೃತ ದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆ ನಡೆಸಿದರು.