ಬೀದರ್: ಕಮಲನಗರ ತಾಲ್ಲೂಕಿನ ನಿಡೋದಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವ್ಯಾಪ್ತಿಯ ಹಾಲಹಳ್ಳಿ ಗ್ರಾಮದಲ್ಲಿ ರೈತರಿಗೆ ಡಿಎಪಿ ರಸಗೊಬ್ಬರ ವಿತರಿಸಲಾಯಿತು.
ಸಂಘದ ಅಧ್ಯಕ್ಷ ದಯಾನಂದ ಬಿರಾದಾರ ಮಾತನಾಡಿ, ಡಿಸಿಸಿ ಬ್ಯಾಂಕ್ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂಲಕ ರಸಗೊಬ್ಬರ ಸರಬರಾಜು ಮಾಡುತ್ತಿರುವುದರಿಂದ ರೈತರಿಗೆ ಬಹಳ ಅನುಕೂಲವಾಗಿದೆ ಎಂದರು.
ಪಿಕೆಪಿಎಸ್ನಲ್ಲಿ ರಸಗೊಬ್ಬರದ ಅಭಾವ ಇಲ್ಲ. ಹೀಗಾಗಿ ರೈತರು ಆತಂಕ ಪಡುವ ಅಗತ್ಯ ಇಲ್ಲ ಎಂದು ಸಂಘದ ನಿರ್ದೇಶಕ ಶಿವಕುಮಾರ ಭಾಲ್ಕೆ ಹೇಳಿದರು.
ನಿಡೋದಾ ಪಿಕೆಪಿಎಸ್ಗೆ ಮೊದಲು 20 ಟನ್ ರಸಗೊಬ್ಬರ ಕಳುಹಿಸಲಾಗಿತ್ತು. ನಿಡೋದಾ ಗ್ರಾಮದ ಬಹುತೇಕ ರೈತರಿಗೆ ರಸಗೊಬ್ಬರ ವಿತರಿಸಲಾಗಿತ್ತು. ಆದರೆ, ಹಾಲಹಳ್ಳಿ ಗ್ರಾಮದ ರೈತರಿಗೆ ರಸಗೊಬ್ಬರದ ತುಸು ಕೊರತೆ ಉಂಟಾಗಿತ್ತು ಎಂದು ತಿಳಿಸಿದರು.
ರಸಗೊಬ್ಬರ ಸಮಸ್ಯೆ ಬಗ್ಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಉಮಾಕಾಂತ ನಾಗಮಾರಪಳ್ಳಿ ಅವರ ಗಮನ ಸೆಳೆಯಲಾಗಿತ್ತು. ತಮ್ಮ ಮನವಿಗೆ ಸ್ಪಂದಿಸಿ ತಕ್ಷಣ 25 ಟನ್ ರಸಗೊಬ್ಬರ ಪೂರೈಸಿದ್ದಾರೆ ಎಂದು ಹೇಳಿದರು.
ಸಂಘದ ಉಪಾಧ್ಯಕ್ಷೆ ಜಗದೇವಿ ವೈಜಿನಾಥ, ಜಗನ್ನಾಥ ರಾಸೂರೆ, ಸೂರ್ಯಕಾಂತ ಅಜನೆ, ಚಾಂದೋರಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪ್ರವೀಣ ಕಾರಬಾರಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚಂದ್ರಕಾಂತ ವಲ್ಲೇಪುರೆ ಇದ್ದರು.