ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಔರಾದ್: ನೀರಿನ ಸಮಸ್ಯೆ ಉಲ್ಬಣ

ಸಂತೆಗೆ ತಟ್ಟಿದ ಬಿಸಿ: ಜೀವಜಲವಿಲ್ಲದೆ ಬಸವಳಿಯುವ ಜಾನುವಾರುಗಳು
Last Updated 6 ಮಾರ್ಚ್ 2021, 2:55 IST
ಅಕ್ಷರ ಗಾತ್ರ

ಔರಾದ್: ಬಿಸಿಲಿನ ದಗೆ ಹೆಚ್ಚುವ ಮುನ್ನವೇ ತಾಲ್ಲೂಕಿನ ಕೆಲ ಕಡೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸಿದೆ.

ಪಟ್ಟಣದ ಎಪಿಎಂಸಿ ಆವರಣದಲ್ಲಿ ನಡೆಯುವ ವಾರದ ಸಂತೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಇಲ್ಲಿ ಪ್ರತಿ ಸೋಮವಾರ ಹಾಗೂ ಮಂಗಳವಾರ ಎರಡು ದಿನ ಜಾನುವಾರುಗಳ ಸಂತೆ ನಡೆಯುತ್ತದೆ. ಪಕ್ಕದ ತೆಲಂಗಾಣ, ಮಹಾರಾಷ್ಟ್ರ ಸೇರಿ ಹಲವು ಕಡೆಗಳಿಂದ ಎರಡು ಸಾವಿರ ಜಾನುವಾರುಗಳು ಬರುತ್ತವೆ. ಹೀಗೆ ಬರುವ ಜಾನುವಾರು ಹಾಗೂ ರೈತರಿಗೆ ಎಪಿಎಂಸಿಯವರು ಕುಡಿಯಲು ನೀರಿನ ವ್ಯವಸ್ಥೆ ಮಾಡುತ್ತಾರೆ. ಆದರೆ ಈಗ ಕಳೆದ ಎರಡು ವಾರದಿಂದ ನೀರಿನ ಕೊರತೆಯಾಗಿ ರೈತರು ತೊಂದರೆ ಎದುರಿಸುತ್ತಿದ್ದಾರೆ.

‘ಜಾನುವಾರುಗಳಿಗೆ ನಾಲ್ಕೈದು ಕಡೆ ನೀರು ಸಂಗ್ರಹ ತೊಟ್ಟಿ ವ್ಯವಸ್ಥೆ ಮಾಡಲಾಗಿದೆ. ಆದರೆ ಅವುಗಳಲ್ಲಿ ನೀರಿಲ್ಲ. ಹೀಗಾಗಿ ಜಾನುವಾರುಗಳು ಬಿಸಿಲಿನಲ್ಲಿ ಒದ್ದಾಡುತ್ತಿವೆ’ ಎಂದು ಯನಗುಂದಾ ರೈತ ಶಿವಾನಂದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಒಂದು ತೊಟ್ಟಿಗೆ ಟ್ಯಾಂಕರ್‌ನಿಂದ ನೀರು ಹಾಕುತ್ತಿದ್ದಾರೆ. ಅದೂ ಎಲ್ಲ ಜಾನುವಾರುಗಳಿಗೆ ಸಾಕಾಗುತ್ತಿಲ್ಲ. ಈ ಕುರಿತು ಎಪಿಎಂಸಿ ಅಧಿಕಾರಿಗಳು ಹಾಗೂ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಯವರಿಗೆ ತಿಳಿಸಿದರೂ ಪ್ರಯೋಜನವಾಗಿಲ್ಲ’ ಎಂದು ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ ತಿಳಿಸಿದ್ದಾರೆ.

‘ವಾಲ್ ಸಮಸ್ಯೆಯಿಂದ ಪಟ್ಟಣ ಪಂಚಾಯಿತಿಯಿಂದ ಬರುವ ನೀರು ನಿಂತು ಹೋಗಿದೆ. ಹೀಗಾಗಿ ಸದ್ಯಕ್ಕೆ ಟ್ಯಾಂಕರ್ ಮೂಲಕ ನೀರು ಪೂರೈಸುತ್ತಿದ್ದೇವೆ. ಬರುವ ಸೋಮವಾರದೊಳಗೆ ಹೊಸದಾಗಿ ಹೊಸ ಕೊಳವೆ ಬಾವಿಯಿಂದ ಜಾನುವಾರುಗಳಿಗೆ ಕುಡಿಯುವ ನೀರು ಪೂರೈಸಲಾಗುವುದು’ ಎಂದು ಎಪಿಎಂಸಿ ಪ್ರಭಾರ ಕಾರ್ಯದರ್ಶಿ ಅಮಜತ್‍ಖಾನ್ ಹೇಳಿದ್ದಾರೆ.

‘ಸಂತೆಗೆ ಬರುವ ರೈತರು ಹಾಗೂ ಜಾನುವಾರುಗಳಿಗೆ ನೀರಿನ ಸೌಲಭ್ಯ ಕಲ್ಪಿಸದಿದ್ದಲ್ಲಿ ನಾವು ಪ್ರತಿಭಟನೆ ಮಾಡಬೇಕಾಗುತ್ತದೆ’ ಎಂದು ಸಂತೆಗೆ ಬರುವ ರೈತರುಎಚ್ಚರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT