ಬೀದರ್: ತಾಲ್ಲೂಕಿನಲ್ಲಿ 12 ದಿನ ನಡೆಯಲಿರುವ ಕೋವಿಡ್ ಲಸಿಕೆ ಜಾಗೃತಿ ಜಾಥಾಕ್ಕೆ ಇಲ್ಲಿಯ ತಾಲ್ಲೂಕು ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಸೋಮವಾರ ಚಾಲನೆ ದೊರೆಯಿತು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿ.ಜಿ. ರೆಡ್ಡಿ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಗದಗೆಪ್ಪ ಅವರು ಜಂಟಿಯಾಗಿ ಕರಪತ್ರ ಬಿಡುಗಡೆ ಮಾಡುವ ಮೂಲಕ ಚಾಥಾಕ್ಕೆ ಚಾಲನೆ ನೀಡಿದರು.
ಅರಳು ಸಂಸ್ಥೆಯ ನಿರ್ದೇಶಕ ಡಾ. ಕೆ.ಟಿ ಮೆರಿಲ್ ಮಾತನಾಡಿ, ಅರಳು ಸಂಸ್ಥೆ, ಬೆಂಗಳೂರಿನ ವಿಸ್ತಾರ ಸಂಸ್ಥೆ, ಜಿಲ್ಲಾ ಪಂಚಾಯಿತಿ ಹಾಗೂ ತಾಲ್ಲೂಕು ಪಂಚಾಯಿತಿ ಸಹಯೋಗದಲ್ಲಿ ಬೀದರ್ ತಾಲ್ಲೂಕಿನ ಗ್ರಾಮಗಳಲ್ಲಿ ಜೂನ್ 18ರ ವರೆಗೆ ಜಾಥಾ ನಡೆಯಲಿದೆ ಎಂದರು.
ಜಾಥಾ ವೇಳೆ ಆಟೊದಲ್ಲಿ ಧ್ವನಿವರ್ಧಕ ಬಳಕೆ ಹಾಗೂ ಕರಪತ್ರ ವಿತರಣೆ ಮೂಲಕ ಕೋವಿಡ್ ಸುರಕ್ಷತಾ ಕ್ರಮಗಳು ಹಾಗೂ ಲಸಿಕೆ ಮಹತ್ವ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.
ಕೋವಿಡ್ ಸೋಂಕಿನಿಂದ ರಕ್ಷಣೆ ಪಡೆಯಲು ಲಸಿಕೆ ತೀರಾ ಅವಶ್ಯಕವಾಗಿದೆ. ಲಸಿಕೆ ಬಗ್ಗೆ ಅನಗತ್ಯ ಭಯಪಡಬಾರದು. ಲಸಿಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ. ಸಂಪೂರ್ಣ ಸುರಕ್ಷಿತವಾಗಿದೆ ಎಂದು ತಿಳಿಸಿದರು.
ಸಾರ್ವಜನಿಕರು ಸ್ವಯಂ ಪ್ರೇರಣೆಯಿಂದ ಲಸಿಕಾ ಕೇಂದ್ರಗಳಿಗೆ ತೆರಳಿ ಲಸಿಕೆ ಪಡೆಯಬೇಕು. ಮಾಸ್ಕ್, ಸ್ಯಾನಿಟೈಸರ್ ಬಳಕೆ, ಸುರಕ್ಷಿತ ಅಂತರ ಕಾಯ್ದುಕೊಳ್ಳುವಿಕೆ ಸೇರಿದಂತೆ ಸುರಕ್ಷತಾ ನಿಯಮಗಳ ಪಾಲನೆ ಮೂಲಕ ಕೋವಿಡ್ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಕೈಜೋಡಿಸಬೇಕು ಎಂದು ಮನವಿ ಮಾಡಿದರು.
ಕೋವಿಡ್ ಜಿಲ್ಲಾ ಸಮನ್ವಯ ಸಮಿತಿಯ ಸದಸ್ಯ ಶ್ರೀಮಂತ ಸಪಾಟೆ, ವಿಸ್ತಾರ ಸಂಸ್ಥೆ ಜಿಲ್ಲಾ ಸಂಯೋಜಕಿ ಸುನೀತಾ, ಮಹಾಮಾನವ ಚಾರಿಟಬಲ್ ಟ್ರಸ್ಟ್ನ ಅರುಣ ಪಾಟೀಲ, ಸಂಘ– ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.