ಕಮಲನಗರ: ಪ್ರತಿಯೊಬ್ಬರೂ ಸಸಿ ಬೆಳೆಸುವುದಕ್ಕೆ ಆದ್ಯತೆ ನೀಡಬೇಕು ಎಂದು ಪರಿಸರವಾದಿ ಶರಣು ಕುಶನೂರೆ ಹೇಳಿದರು.
ನಿರಂತರ ಸೇವಾ ಸಮಿತಿ ಸಂಘಟನೆಯು, ಪರಿಸರ ಮಾಲಿನ್ಯ ದಿನಾಚರಣೆ ಪ್ರಯುಕ್ತ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಆಯೋಜಿಸಿದ್ದ ಜನಜಾಗೃತಿ ವೃಕ್ಷ ಆಂದೋಲನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಶುದ್ಧ ಗಾಳಿ, ಶುದ್ಧ ಕುಡಿಯುವ ನೀರಿಗಾಗಿ ಗಿಡಗಳನ್ನು ನೆಡಬೇಕು. ರೈತರು ಸಾವಯವ ಕೃಷಿಗೆ ಮುಂದಾಗಬೇಕು. ಜತೆಗೆ ಪರಿಸರದಲ್ಲಿನ ಸಸ್ಯ ಹಾಗೂ ಜೀವ ಸಂಕುಲ ಸಂರಕ್ಷಣೆಯನ್ನು ಸವಾಲಾಗಿ ಸ್ವೀಕರಿಸಬೇಕು. ಶುಭ ಸಮಾರಂಭಗಳಲ್ಲಿ ಸಸಿಗಳನ್ನು ವಿತರಿಸಬೇಕು ಎಂದು ಸಲಹೆ ನೀಡಿದರು.
ನಿರಂತರ ಸೇವಾ ಸಮಿತಿ ಸಂಘಟನೆಯ ಕಮಲನಗರ ತಾಲ್ಲೂಕು ಘಟಕದ ಅಧ್ಯಕ್ಷ ರಾಜಶೇಖರ ಅಜ್ಜ ಮಾತನಾಡಿ,‘ಪರಿಸರ ಸಂರಕ್ಷಣೆ ಎಂದರೆ ಕೇವಲ ಸಸಿ ನೆಡುವುದು ಮಾತ್ರವಲ್ಲ. ನೆಟ್ಟ ಸಸಿಗಳನ್ನು ಮಕ್ಕಳಂತೆ ಪೋಷಿಸಬೇಕು. ಇಲ್ಲಿಯ ಡಾ.ಚನ್ನಬಸವ ಪಟ್ಟದ್ದೇವರ ಕೆರೆ ಮತ್ತು ಹಳ್ಳಗಳಲ್ಲಿ ತ್ಯಾಜ್ಯ ಎಸೆದು ಗಲೀಜು ಮಾಡದೇ ಸ್ವಚ್ಛತೆ ಕಾಪಾಡಬೇಕು’ ಎಂದರು.
ಕರ್ನಾಟಕ ಸ್ವಾಭಿಮಾನಿ ಸಂಘಟನೆಯ ರಾಜ್ಯ ಘಟಕದ ಅಧ್ಯಕ್ಷ ಓಂಕಾರ ಸೋಲ್ಲಪುರೆ, ಮಾದಯ್ಯ ಸ್ವಾಮಿ, ನಿತೇಶ ವಾಘಮಾರೆ, ಶಿವಶರಣಪ್ಪ, ರಮೇಶ ಹಿಪ್ಪಳಗಾಂವೆ, ಸಚೀನ್ ಆಗಲೆ ಹಾಗೂ ಕ್ಲಾಸಿಕ್ ಕೋಚಿಂಗ್ ಶಾಲೆ ಮಕ್ಕಳು ಇದ್ದರು.
ಎಪಿಎಂಸಿ ಆವರಣದಲ್ಲಿ ಶಾಲೆ ಮಕ್ಕಳು 20ಕ್ಕೂ ಅಧಿಕ ಸಸಿಗಳನ್ನು ರಾಜಶೇಖರ ಕರಂಜಿ ನೇತ್ರತ್ವದಲ್ಲಿ ನೆಟ್ಟರು.