ಬೀದರ್: ಗುಲಬರ್ಗಾ ವಿಶ್ವವಿದ್ಯಾಲಯ, ಭಾಲ್ಕಿ ತಾಲ್ಲೂಕಿನ ಹಾಲಳ್ಳಿಯ ಸ್ನಾತಕೋತ್ತರ ಕೇಂದ್ರದಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಹಾಲಳ್ಳಿ ಕ್ಯಾಂಪಸ್ಗೆ ಮೂಲಸೌಕರ್ಯ ಒದಗಿಸಬೇಕು ಎಂದು ಎಬಿವಿಪಿ ಒತ್ತಾಯಿಸಿದೆ.
ಗುಲಬರ್ಗಾ ವಿಶ್ವವಿದ್ಯಾಲಯದಲ್ಲಿ ಬೋಧಕ, ಬೋಧಕೇತರ ಹುದ್ದೆ ಸೇರಿ ಒಟ್ಟು 675 ಹುದ್ದೆಗಳು ಹಾಗೂ ಹಾಲಳ್ಳಿ ಜ್ಞಾನ ಕಾರಂಜಿಯಲ್ಲಿ ಬಹುತೇಕ ಬೋಧಕ. ಬೋಧಕೇತರ ಹುದ್ದೆಗಳು ಖಾಲಿ ಇವೆ. ಸಿಬ್ಬಂದಿ ನೇಮಕ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ಕೊಡಲು ನೆರವಾಗಬೇಕು ಎಂದು ಬೀದರ್ಗೆ ಭೇಟಿ ನೀಡಿದ್ದ ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಅವರಿಗೆ ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರೇವಣಸಿದ್ದ ಜಾಡರ್ ಮನವಿಪತ್ರ ಸಲ್ಲಿಸಿದರು.
ಹಾಲಳ್ಳಿ ಸ್ನಾತಕೋತ್ತರ ಜ್ಞಾನ ಕಾರಂಜಿ ಆವರಣದಲ್ಲಿ 500 ವಿದ್ಯಾರ್ಥಿಗಳು ಕುಳಿತುಕೊಳ್ಳುವ ಸಾಮರ್ಥ್ಯದ ಸಾಂಸ್ಕೃತಿಕ ಭವನ, ಕೇಂದ್ರದ ಸುತ್ತ ಆವರಣಗೋಡೆ ನಿರ್ಮಾಣ ಮಾಡಬೇಕು. ಬೀದರ್ ನಗರದ ಮಹಿಳಾ ಪದವಿ ಕಾಲೇಜು ಹೊಸ ಕಟ್ಟಡ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಸುತ್ತ ಆವರಣ ಗೋಡೆ ನಿರ್ಮಿಸಬೇಕು. ಜಿಲ್ಲೆಯ ಎಲ್ಲ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಇ-ಗ್ರಥಾಲಯ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ಎಬಿವಿಪಿ ರಾಷ್ಟ್ರೀಯ ಕಾರ್ಯಕಾರಣಿ ಸದಸ್ಯ ರೇವಣಸಿದ್ದ ಜಾಡರ್, ನಗರ ಕಾರ್ಯದರ್ಶಿ ಪ್ರದೀಪ ರೆಡ್ಡಿ, ಪ್ರಮುಖರಾದ ಅರವಿಂದ ಸುಂದಾಳಕರ್. ವಿಕಾಸ ಚೊರಮಲ್ಲೆ, ಕಿರಣ ಪಾಟೀಲ ಹಾಗೂ ಸಂಗಮೇಶ ಜಾಮಶೆಟ್ಟಿ ಇದ್ದರು.