ಬೀದರ್: ಗೊಂಡ ಸಮುದಾಯಕ್ಕೆ ಎಸ್.ಟಿ. ಗೊಂಡ ಪರ್ಯಾಯ ಪದವಾಗಿ ಪರಿಗಣಿಸಲು ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವ ಅರ್ಜುನ ಮುಂಡಾ ಹೇಳಿದರು.
ನವದೆಹಲಿಯಲ್ಲಿ ಅವರನ್ನು ಭೇಟಿ ಮಾಡಿದ ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರ ನೇತೃತ್ವದ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಗೊಂಡ ಸಮುದಾಯದ ಮುಖಂಡರ ನಿಯೋಗಕ್ಕೆ ಅವರು ಈ ಭರವಸೆ ನೀಡಿದರು.
ಅಧಿಕಾರಿಗಳ ಜತೆ ಈ ಸಂಬಂಧ ಚರ್ಚೆ ನಡೆಸಲಾಗುವುದು ಎಂದು ತಿಳಿಸಿದರು.
ಎಸ್.ಟಿ. ಗೊಂಡ ಹಾಗೂ ಕುರುಬ ಸಮುದಾಯದಲ್ಲಿ ಯಾವುದೇ ವ್ಯತ್ಯಾಸ ಇಲ್ಲ. ಕುರುಬ ಸಮುದಾಯದವರನ್ನು ಎಸ್.ಟಿ. ಗೊಂಡ ಪರ್ಯಾಯ ಪದಕ್ಕೆ ಪರಿಗಣಿಸದ ಕಾರಣ ಸಮಾಜದವರು ಶಿಕ್ಷಣ, ಉದ್ಯೋಗದ ಸಂದರ್ಭದಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಖೂಬಾ ಅವರು ಮುಂಡಾ ಅವರಿಗೆ ಮನವರಿಕೆ ಮಾಡಿದರು.
ಕುರುಬ ಸಮುದಾಯಕ್ಕೆ ಎಸ್.ಟಿ. ಗೊಂಡ ಪರ್ಯಾಯ ಪದವಾಗಿ ಪರಿಗಣಿಸಬೇಕು. ಈ ಕುರಿತು ಸಂಬಂಧಪಟ್ಟವರಿಗೆ ನಿರ್ದೇಶನ ನೀಡಬೇಕು ಎಂದು ಕೋರಿದರು. ಇದಕ್ಕೆ ಮುಂಡಾ ಅವರು ಸಕಾರಾತ್ಮಕವಾಗಿ ಸ್ಪಂದಿಸಿದರು.
ವಿಧಾನ ಪರಿಷತ್ ಸದಸ್ಯ ರಘುನಾಥರಾವ್ ಮಲ್ಕಾಪೂರೆ, ಶಾಸಕ ಬಂಡೆಪ್ಪ ಕಾಶೆಂಪೂರ, ಗೊಂಡ ಸಮುದಾಯದ ಪ್ರಮುಖರಾದ ಅಮೃತರಾವ್ ಚಿಮಕೋಡೆ, ಮಹಾಂತೇಶ ಕೌಜಲಗಿ, ಬಸವರಾಜ ಮಾಳಗೆ, ಧರ್ಮಣ್ಣ ದೊಡ್ಡಮನಿ, ಪಂಡಿತ ಚಿದ್ರಿ, ಎಂ.ಎಸ್. ಕಟಗಿ ನಿಯೋಗದಲ್ಲಿ ಇದ್ದರು.